ಬೆಂಗಳೂರು: 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಪೂರೈಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪಠ್ಯ ಪುಸ್ತಕ ನೀಡಿದರೆ ಮಾತ್ರ ವಿದ್ಯಾರ್ಥಿಗಳ ಹಾಜರಾತಿ ಮತ್ತು ಸರ್ಕಾರ ನೀಡುತ್ತಿರುವ ಶಿಕ್ಷಣಕ್ಕೆ ಅರ್ಥ ಬರಲಿದೆ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
9ರಿಂದ 12ನೇ ತರಗತಿ ತನಕ ಭೌತಿಕ ತರಗತಿ ಆರಂಭಿಸಲಾಗಿದ್ದು, ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. 1ರಿಂದ 8ನೇ ತರಗತಿ ವರೆಗಿನ ಶಾಲೆ ಆರಂಭಿಸುವ ವಿಷಯದಲ್ಲಿ ಆ.30ರಂದು ನಡೆಯಲಿರುವ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸರ್ಕಾರದ ವಕೀಲರು ಮಾಹಿತಿ ಸಲ್ಲಿಸಿದರು.
ಪಠ್ಯ ಪುಸ್ತಕವನ್ನು ಹಂತ–ಹಂತವಾಗಿ ವಿತರಿಸಲಾಗುತ್ತಿದ್ದು, ಸೆ.30ರೊಳಗೆ ಎಲ್ಲರಿಗೂ ತಲುಪಿಸಲಾಗುವುದು. ಪಿಡಿಎಫ್ ರೂಪದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ರವಾನಿಸಿದ್ದಾರೆ ಎಂದು ವಿವರಿಸಿದರು.
ಪಠ್ಯ ಪುಸ್ತಕ ವಿಷಯದಲ್ಲಿ ಸರ್ಕಾರ ಸಲ್ಲಿಸಿರುವ ಹೇಳಿಕೆ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಇದೇ 30ರೊಳಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ತಿಳಿಸಿತು.