ಚಿತ್ರದುರ್ಗ: ಭೂಕಬಳಿಕೆ ಹಾಗೂ ಜಾತಿನಿಂದನೆಗೆ ಸಂಬಂಧಿಸಿದಂತೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಗೆ (ಎಫ್ಐಆರ್) ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ತಿಳಿಸಿದರು.
'ಪ್ರಕರಣ ದಾಖಲಾದ ಮರುದಿನವೇ ಎಫ್ಐಆರ್ ರದ್ಧತಿಗೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ತನಿಖೆಗೆ ತಾತ್ಕಾಲಿಕ ತಡೆ ನೀಡಿದೆ. ಎಫ್ಐಆರ್ ರದ್ಧತಿ ವಿಚಾರಣೆ ಮುಂದುವರಿಯಲಿದೆ' ಎಂದು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
'ದೂರುದಾರರ ಆರೋಪದಲ್ಲಿ ಹುರುಳಿಲ್ಲ ಹಾಗೂ ವ್ಯಾವಹಾರಿಕವಾಗಿ ಎಲ್ಲ ನಿಯಮ ಪಾಲನೆ ಮಾಡಿರುವುದಾಗಿ ಹೈಕೋರ್ಟ್ ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆವು. ಘಟನೆ ನಡೆದಾಗ ನಾನು ಸ್ಥಳದಲ್ಲಿಯೇ ಇರಲಿಲ್ಲ. ಒಳಸಂಚು ನಡೆಸಿ ದೂರು ದಾಖಲು ಮಾಡಲಾಗಿತ್ತು. ಅಗತ್ಯ ದಾಖಲೆಯನ್ನು ಹೈಕೋರ್ಟ್ ಗೆ ನೀಡಲಾಗಿತ್ತು' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಸಂಪುಟದಿಂದ ಬಿಜೆಪಿ ಕೈಬಿಟ್ಟಿತ್ತೇ?
'2008ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಾನು ಸಚಿವನಾಗಿದ್ದೆ. ಸಂಪುಟ ಸೇರಿದ ಒಂದೇ ವಾರಕ್ಕೆ ನನ್ನ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿತ್ತು. ಆಗ ಬಿಜೆಪಿ ಸಂಪುಟದಿಂದ ನನ್ನನ್ನು ಕೈಬಿಟ್ಟಿತ್ತೇ ಎಂದು ಸಚಿವ ಸುಧಾಕರ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನಿಸಿದರು.
'ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತ. ಸತ್ಯಾಂಶ ತಿಳಿಯದೇ, ದಾಖಲೆ ನೋಡದೇ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ನ ಕೆಲ ಸ್ನೇಹಿತರ ಜತೆ ಮಾತಾಡಿದ್ದೇನೆ. ರಾಜಕೀಯ ಉದ್ದೇಶಕ್ಕೆ ನನ್ನ ವಿರುದ್ಧ ಮಾತನಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ' ಎಂದು ಹೇಳಿದರು.
'ಈ ನೆಲದ ಕಾನೂನನ್ನು ನಾನು ಗೌರವಿಸುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಪೊಲೀಸರು ನೋಟಿಸ್ ನೀಡಿಲ್ಲ. ಪೊಲೀಸ್ ತನಿಖೆಗೆ ಸಹಕಾರ ನೀಡುತ್ತೇನೆ. ಪಾರದರ್ಶಕವಾಗಿರುವ ಕಾರಣಕ್ಕೆ ನನಗೆ ಭಯವಿಲ್ಲ' ಎಂದು ಹೇಳಿದರು.