ಬೆಂಗಳೂರು: ಮೊದಲನೆ ಮದುವೆ ಮತ್ತು ನಾಲ್ಕು ಮಕ್ಕಳ ತಾಯಿ ಎಂಬ ಸಂಗತಿಯನ್ನು ಮರೆಮಾಚಿದ್ದನ್ನು ಪರಿಗಣಿಸಿ ಮಹಿಳೆಯೊಬ್ಬರ ಎರಡನೇ ವಿವಾಹವನ್ನು ಅನೂರ್ಜಿತಗೊಳಿಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ (ಪ್ರಸ್ತುತ ತೆಲಂಗಾಣ ಮುಖ್ಯ ನ್ಯಾಯಮೂರ್ತಿ) ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
‘ಕೌಟುಂಬಿಕ ನ್ಯಾಯಾಲಯವು ಪತಿ ಒದಗಿಸಿದ್ದ ಸಾಕ್ಷ್ಯಧಾರಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ ನಂತರವೇ ವಿಚ್ಛೇದನ ಮಂಜೂರ ಮಾಡಿದೆ. ಹಾಗಾಗಿ, ಈ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಮತ್ತು ಪತಿಯ ಸಾಕ್ಷ್ಯಧಾರಗಳನ್ನು ತಿರಸ್ಕರಿಸಲು ಯಾವುದೇ ಸಕಾರಣ ಈ ನ್ಯಾಯಪೀಠದ ಮುಂದೆ ಇಲ್ಲ‘ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿದೆ.
‘ಪ್ರಕರಣದಲ್ಲಿ ಪತಿಯ (ಎರಡನೇ ಪತಿ) ವಿಚ್ಛೇದನದ ಅರ್ಜಿಗೆ ಸಂಬಂಧಿಸಿದಂತೆ ಮೇಲ್ಮನವಿದಾರರು (ಪತ್ನಿ) ಕೌಟುಂಬಿಕ ನ್ಯಾಯಾಲಯಕ್ಕೆ ಯಾವುದೇ ಆಕ್ಷೇಪಣಾ ಹೇಳಿಕೆ ಸಲ್ಲಿಸಿಲ್ಲ. ತಮ್ಮ ಪರವಾದ ಯಾವುದೇ ಸಾಕ್ಷ್ಯಧಾರಗಳನ್ನೂ ಒದಗಿಸಿಲ್ಲ. ಪತಿಯನ್ನು ಪಾಟಿ ಸವಾಲಿಗೆ ಗುರಿಪಡಿಸಿ, ಅವರ ಸಾಕ್ಷ್ಯಗಳನ್ನು ಅಲ್ಲಗಳೆಯುವ ಪ್ರಯತ್ನವನ್ನೇ ಪತ್ನಿ ಮಾಡಿಲ್ಲ‘ ಎಂದು ನ್ಯಾಯಪೀಠ ಅರ್ಜಿ ವಜಾಕ್ಕೆ ಕಾರಣ ನೀಡಿದೆ. ಮೇಲ್ಮನವಿದಾರ ಪತ್ನಿಯ ಎರಡನೇ ವಿವಾಹವನ್ನು ಅಸಿಂಧುಗೊಳಿಸಿ ವಿಚ್ಛೇದನ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪುರಸ್ಕರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.