ಬೆಂಗಳೂರು: 'ನನ್ನನ್ನು ಪೊಲಿಟಿಕಲ್ ಶೂಟ್ ಮಾಡಲಾಗಿದೆ' ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ನನಗೆ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ಬಂದಿದೆ. ಮುಂದೆ ವಕೀಲರ ಜೊತೆ ಚರ್ಚೆ ನಡೆಸುತ್ತೇನೆ. ಕಾನೂನು ಹೋರಾಟ ನಡೆಸುತ್ತೇನೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳಿಂದಲೂ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದರು.
'ವಿಧಾನಸಭೆಯಿಂದ ಪರಿಷತ್ ಗೆ ಆಯ್ಕೆಯಾಗುವ ಅವಕಾಶ ಇದ್ದರೂ ತಪ್ಪಿಸಿದರು. ಯಾರಿಗೇ ಅದರೂ ಉಪಕಾರ ಸ್ಮರಣೆ ಇರಬೇಕು. ನಮ್ಮ ತ್ಯಾಗವನ್ನು ಎಂದೂ ಮರೆಯಬಾರದು. ಯಾರಿಂದ ಈ ಸರ್ಕಾರ ಬಂದಿದೆ ಎಂಬುದನ್ನು ಅರಿಯಬೇಕು. ನಾನು ಇನ್ನೂ ಆರು ವರ್ಷ ಪರಿಷತ್ ಸದಸ್ಯನಾಗಿರುತ್ತೇನೆ' ಎಂದರು.
'ಈ ವಿಧಾನಸಭೆಯ ಅವಧಿಯವರೆಗೆ ಮಾತ್ರ ನನಗೆ ತೊಡಕಾಗಬಹುದು. ಈ ಅವಧಿ ಮುಗಿದ ಬಳಿಕವಾದರೂ ಸಚಿವರಾಗಬಹುದು ಅಲ್ವಾ. ಅಂದು ಯಾರ ವಿರುದ್ಧ ಬಂಡೆದ್ದು ಬಂದಿದ್ದೆವೋ ಇಂದು ಅವರ ಜೊತೆಯೇ ಕೂರುವಂತಾಗಿದೆ. ಏನೂ ಮಾಡೋದಕ್ಕೆ ಆಗೋದಿಲ್ಲ. ಇವೆಲ್ಲಾ ರಾಜಕೀಯದಲ್ಲಿ ಆಗುತ್ತಿರುತ್ತದೆ. ಇದು ಹೊಂದಾಣಿಕೆ ರಾಜಕೀಯ. ಇದು ನಮ್ಮ ಹೊಂದಾಣಿಕೆ ಅಲ್ಲ. ಮೇಲಿನವರ ಹೊಂದಾಣಿಕೆ. ಹೊಂದಾಣಿಕೆ ಕಷ್ಟವಾದರೂ ಸಹಿಸಿಕೊಳ್ಳಬೇಕಾಗುತ್ತದೆ' ಎಂದರು.