ಬೆಂಗಳೂರು: ಚಂದ್ರಯಾನ-3ರ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದ ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.
ಪೀಣ್ಯದಲ್ಲಿರುವ ಇಸ್ರೊ ಕಮಾಂಡಿಂಗ್ ಸೆಂಟರ್ನಲ್ಲಿ ಚಂದ್ರಯಾನ-3ರ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿ ಶನಿವಾರ ಮಾತನಾಡಿದ ಅವರು, ಆಗಸ್ಟ್ 23ರ ಆ ಕ್ಷಣ ಭಾರತದ ಪಾಲಿಗೆ ಅವಿಸ್ಮರಣೀಯವಾದುದುಸ. ಈ ಐತಿಹಾಸಿಕ ಸಾಧನೆಯನ್ನು ಸ್ಮರಿಸುವುದಕ್ಕಾಗಿ ಆ ದಿನವನ್ನು ಇನ್ನು ಮುಂದೆ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದರು.
ಈ ಯಶಸ್ಸಿನ ನೆನಪಿಗಾಗಿ ಕೇಂದ್ರ ಸರ್ಕಾರದ ವೆಬ್ಸೈಟ್ನಲ್ಲಿ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಸೆಪ್ಟೆಂಬರ್ 1ರಿಂದ ಸ್ಪರ್ಧೆ ಆರಂಭವಾಗಲಿದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಸಂಶೋಧಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.
ಬಾಹ್ಯಾಕಾಶ ಇಲಾಖೆಗೆ ಕೇಂದ್ರ ಸರ್ಕಾರದ ಅನುದಾನ ಕಡಿತ!
ಈ ಸಾಧನೆಯ ನೆನಪಿನಲ್ಲಿ ಇಸ್ರೊ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜೀವನಮಟ್ಟ ಸುಧಾರಣೆ ಹಾಗೂ ಸುಲಲಿತ ಆಡಳಿತದಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆ ಕುರಿತು ರಾಷ್ಟ್ರ ಮಟ್ಟದ ಹ್ಯಾಕಥಾನ್ ಆಯೋಜಿಸಬೇಕು. ಆರೋಗ್ಯ, ಶಿಕ್ಷಣ, ಟೆಲಿ ಮೆಡಿಸಿನ್, ಹವಾಮಾನ ಮುನ್ಸೂಚನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಳಕೆಗೆ ಇರುವ ಅವಕಾಶಗಳ ಕುರಿತು ಸಂಶೋಧನೆಗೆ ಯುವಜನರಿಗೆ ಪ್ರೇರಣೆ ನೀಡಲು ಈ ಹ್ಯಾಕಥಾನ್ ವೇದಿಕೆ ಆಗಬೇಕು ಎಂದು ಸಲಹೆ ನೀಡಿದರು.
#WATCH | "Today, I am feeling a different level of happiness...such occasions are very rare...this time, I was so restless...I was in South Africa but my mind was with you: PM Modi at ISRO Telemetry Tracking & Command Network Mission Control Complex in Bengaluru pic.twitter.com/j1qmx7jGTp
— ANI (@ANI) August 26, 2023
ಭಾರತ ಈಗ ಬಾಹ್ಯಾಕಾಶ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ. ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ 2,500 ನವೋದ್ಯಮಗಳು ಭಾರತದಲ್ಲಿವೆ. ಈ ಕ್ಷೇತ್ರದಚ ವಹಿವಾಟು 16 ಬಿಲಿಯನ್ ಡಾಲರ್ ತಲುಪಿದೆ. ಈ ಸಾಧನೆಯು 2047ರಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಾಣುವ ಗುರಿ ತಲುಪಲು ಕಾರಣವಾಗಲಿದೆ ಎಂದರು.
ಚಂದ್ರಯಾನ-3ರ ಲ್ಯಾಂಡರ್ ಚಂದ್ರನ ಮೇಲೆ ಇಳಿದಾಗ ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ಅಲ್ಲಿಂದ ಗ್ರೀಸ್ ಪ್ರವಾಸಕ್ಕೆ ತೆರಳಿದೆ. ಆದರೆ, ನನ್ನ ಮನಸ್ಸೆಲ್ಲವೂ ಇಲ್ಲಿಯೇ ಇತ್ತು. ದೂರ ಉಳಿದು ನಿಮಗೆ ಅನ್ಯಾಯ ಮಾಡುತ್ತಿದ್ದೀನೇನೋ ಎಂಬ ಭಾವನೆ ಮೂಡಿತ್ತು. ಅದಕ್ಕಾಗಿ ಗ್ರೀಸ್ನಿಂದ ನೇರ ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ಅಭಿನಂದಿಸಿದ ಬಳಿಕ ಸಮಾಧಾನವಾಗಿದೆ ಎಂದು ಮೋದಿ ಹೇಳಿದರು.
ವಿಜ್ಞಾನಿಗಳ ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ: ಇಸ್ರೊಗೆ ಭೇಟಿ
ಈ ಸಾಧನೆಯ ಮೂಲಕ ಚಂದ್ರನ ಮೇಲೆ ಭಾರತದ ಶಂಖನಾದವನ್ನು ಮೊಳಗಿಸಿದೀರಿ. ವಿಕ್ರಮ್ನ ವಿಶ್ವಾಸ ಮತ್ತು ಪ್ರಗ್ಯಾನ್ನ ಪರಾಕ್ರಮವು ಇಡೀಷ ಜಗತ್ತು ಭಾರತದತ್ತ ನೋಡುವಂತೆ ಮಾಡಿದೆ. ಚಂದ್ರನ ಮೇಲೆ ಭಾರತದ ಚಂದ್ರಯಾನ-3ರ ಲ್ಯಾಂಡರ್ನ ಸ್ಪರ್ಶವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಹೊಸ ಮಾರ್ಗವೊಂದನ್ನು ತೋರಿಸಿದೆ ಎಂದು ಶ್ಲಾಘಿಸಿದರು.
ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಪ್ರಧಾನಿಯವರಿಗೆ ಚಂದ್ರಯಾನ-3ರ ಪ್ರತಿಕೃತಿಯನ್ನು ನೀಡಿ ಗೌರವಿಸಿದರು. ಸೋಮನಾಥ್ ಸೇರಿದಂತೆ ಚಂದ್ರಯಾನ-3ರ ನೇತೃತ್ವ ವಹಿಸಿದ್ದ ವಿಜ್ಞಾನಿಗಳಷ ಬೆನ್ನುತಟ್ಟಿ ಪ್ರಧಾನಿ ಅಭಿನಂದಿಸಿದರು.
#WATCH | Bengaluru: I wanted to meet you as soon as possible and salute you…salute your efforts...": PM Modi gets emotional while addressing the ISRO scientists pic.twitter.com/R2BsyyPiNc
— ANI (@ANI) August 26, 2023
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.