ಬೆಳಗಾವಿ: ಬಿಜೆಪಿ ವಿರುದ್ಧ ಪರಸ್ಪರ ಹೋರಾಟ ಮಾಡುತ್ತಿದ್ದೇವೆ. ದೇಶಕ್ಕೆ ಆಗುವ ಅನಾಹುತ ತಪ್ಪಿಸಲು ಒಂದಾಗಿದ್ದೇವೆ. ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಳ್ಳಬೇಕು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ದೇಶದಲ್ಲಿ ದಲಿತರು, ಮುಸ್ಲಿಮರಿಗೆ ತೊಂದರೆ ಕೊಡಲಾಗುತ್ತಿದೆ. ದೇಶದ ಐಕ್ಯತೆ ಹಾಗೂ ಎಲ್ಲ ಧರ್ಮಗಳ ನಡುವೆ ಸಾಮರಸ್ಯ ಇರಬೇಕು. ದೇಶದಲ್ಲಿ ದೊಡ್ಡ ಅನಾಹುತ ಆಗುವಸಾಧ್ಯತೆ ಇದೆ.ಅದನ್ನು ತಪ್ಪಿಸಲು ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
‘ರಾಜ್ಯ ಒಂದು ಜಾತಿಗೆ ಸೀಮಿತವಾಗಿಲ್ಲ. ಕೌಜಲಗಿ ನಮ್ಮ ಜಾತಿಯವರೇ? ಅವರನ್ನು ಸಚಿವರನ್ನಾಗಿ ಮಾಡಿದ್ದೆ. ಈ ಭಾಗ ಅಲಕ್ಷ್ಯ ಮಾಡಲಾಗಿದೆ, ಪ್ರತ್ಯೇಕ ರಾಜ್ಯ ರಚನೆ ಮಾಡಬೇಕು ಎನ್ನುವವರೂ ಇದ್ದಾರೆ. ಈ ಕುರಿತು ಯೋಚನೆ ಮಾಡಿ ಅವೇಶ ಬೇಡ’ ಎಂದರು.
ಈಗ ಮೈತ್ರಿ ಮಾಡಿಕೊಂಡಿದ್ದೇವೆ. ಆದರೆ ಎಷ್ಟು ದಿನ ಒಟ್ಟಿಗೆ ಇರುತ್ತೇವೆ ಎಂಬುದು ಗೊತ್ತಿಲ್ಲ, ಕುಮಾರಸ್ವಾಮಿ ಯಾವಾಗ ರಾಜೀನಾಮೆ ಕೊಡುತ್ತಾರೆ ಅಂತ ಮಾಧ್ಯಮದವರೂ ಕಾಯುತ್ತ ಇದ್ದಾರೆ. ಅದು ಸಾಧ್ಯವಿಲ್ಲ ಎಂದು ಹೇಳಿದರು.
ಇಷ್ಟು ದ್ವೇಷವೇಕೆ? ಎಲ್ಲರೂ ತಾಯಿ ಭುವನೇಶ್ವರಿ ಮಕ್ಕಳು ಎನ್ನುವುದನ್ನು ಮರೆಯಬಾರದು. ಬಿಜೆಪಿ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿವೆಯೇ? ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಅಪಾಯ ತರುವುದು ಬೇಡ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೆ ಹೆಚ್ಚಿನವರು ಲಿಂಗಾಯತರೇ ರಾಜ್ಯ ಆಳಿದ್ದಾರೆ. 23 ವರ್ಷ ಆಡಳಿತ ನಡೆಸಿದ ಲಿಂಗಾಯತರ ಸಾಧನೆ ಏನು? ನಾವೇನು ದ್ರೋಹ ಮಾಡಿದ್ದೇವೆ ಎನ್ನುವುದು ವಿಧಾನಸಭೆಯಲ್ಲಿ ಚರ್ಚೆಯಾಗಲಿ, ಎಲ್ಲವೂ ಬಯಲಿಗೆ ಬರಲಿ ಎಂದು ಹೇಳಿದರು.
ನೀವೇ ತಿಕ್ಕಾಟ ಮಾಡುತ್ತಿದ್ದರೆ ಪಕ್ಷ ಕಟ್ಟಲಾದೀತೇ? ತಪ್ಪುಗಳಾಗಿದ್ದರೆ ಸರಿಪಡಿಸುತ್ತೇವೆ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಇದೀನ ಪರಿಸ್ಥಿತಿಯಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಮುಂದಾದರೆ ಎರಡು ಪಕ್ಷಗಳಿಗೂ ನಷ್ಟವಾಗುತ್ತದೆ ಎಂದರು.
ಪೆಟ್ರೋಲ್ ಬೆಲೆ ಹೆಚ್ಚಾಯ್ತು ಎಂದು ಕುಮಾರಸ್ವಾಮಿ ವಿರುದ್ಧ ದೂರಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಸೆಸ್ ಅನ್ನು 9ರಿಂದ 18ಕ್ಕೆ ತೆಗೆದುಕೊಂಡು ಹೋದರು ಎಂದು ಕಿಡಿಕಾರಿದರು.
ಪಕ್ಷ ಕಾರ್ಯಕರ್ತರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸಿಎಂ ಹಾಗೂ ಡಿಸಿಎಂಗೆ ತಿಳಿಸಿದ್ದೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.