ಬೆಂಗಳೂರು: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಶನಿವಾರ (ಜ. 13) ನಡೆಯಲಿದೆ.
41 ವಿವಿಧ ವಿಷಯಗಳಿಗೆ ನಡೆಯಲಿರುವ ಈ ಪರೀಕ್ಷೆಗೆ ಒಟ್ಟು 1,17,302 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ತಿಳಿಸಿದ್ದಾರೆ.
ಬೆಂಗಳೂರು ನಗರ, ಧಾರವಾಡ, ಹಾವೇರಿ, ಬಳ್ಳಾರಿ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಿವೆ. ಎಲ್ಲ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
‘ಶನಿವಾರ ಬೆಳಿಗ್ಗೆ 10ರಿಂದ 11 ಗಂಟೆಯವರೆಗೆ ಸಾಮಾನ್ಯ ಪರೀಕ್ಷೆ (ಪತ್ರಿಕೆ-1) ಇರಲಿದೆ. ಮಧ್ಯಾಹ್ನ 12ರಿಂದ 2ರವರೆಗೆ ಅದೇ ಕೇಂದ್ರಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಪರೀಕ್ಷೆ (ಪತ್ರಿಕೆ- 2) ನಡೆಯಲಿದೆ. ಒಮ್ಮೆ ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳು ಹೋದ ಬಳಿಕ ಎರಡೂ ಪತ್ರಿಕೆಗಳ ಪರೀಕ್ಷೆ ಮುಗಿದ ನಂತರವೇ ಹೊರಬರಲು ಅವಕಾಶ ನೀಡಲಾಗುವುದು. ಕಟ್ಟುನಿಟ್ಟಿನ ತಪಾಸಣೆ ಇರುವ ಕಾರಣ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮೊದಲೇ ಬರಬೇಕು’ ಎಂದು ಅವರು ಸೂಚಿಸಿದ್ದಾರೆ.
‘ವಾಣಿಜ್ಯ ಶಾಸ್ತ್ರದ ಪರೀಕ್ಷೆಯನ್ನು ಅತಿ ಹೆಚ್ಚು 16 ಸಾವಿರ ಮಂದಿ, ಕನ್ನಡ ವಿಷಯವನ್ನು 11 ಸಾವಿರ ಮಂದಿ ತೆಗೆದುಕೊಂಡಿದ್ದಾರೆ. ಭಾಷಾಶಾಸ್ತ್ರದ ವಿಷಯದಲ್ಲಿ ಅತಿ ಕಡಿಮೆ 25 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆಗೆ ಹಾಜರಾಗುವ ಒಟ್ಟು ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ ಶೇ 6ರಷ್ಟು ಮಂದಿ ಅಂತಿಮವಾಗಿ ಕೆ–ಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲಿದ್ದಾರೆ. ಇದರಲ್ಲಿ ರೋಸ್ಟರ್ ನಿಯಮಗಳನ್ನು ಪಾಲಿಸಲಾಗುವುದು’ ಎಂದು ವಿವರಿಸಿದ್ದಾರೆ.
800 ಇ-ಮೇಲ್: ‘ನೋಂದಣಿ ಸಂಖ್ಯೆ ಕಳೆದುಕೊಂಡ 800ಕ್ಕೂ ಹೆಚ್ಚು ಮಂದಿ ಕೆ-ಸೆಟ್ ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡಿಲ್ಲ. ಅಂಥವರ ಇ-ಮೇಲ್ಗಳಿಗೆ ನೋಂದಣಿ ಸಂಖ್ಯೆ ರವಾನಿಸುವ ಕೆಲಸವನ್ನು ಕೆಇಎ ಮಾಡಿದೆ. ಆ ಮೂಲಕ, ಎಲ್ಲರೂ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದೂ ರಮ್ಯಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.