ಬೆಂಗಳೂರು: ಹೊಸಪೇಟೆ (ವಿಜಯನಗರ) ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಅವರನ್ನು ಅಮಾನತುಗೊಳಿಸಿ ಕೆಪಿಸಿಸಿ ಹೊರಡಿಸಿದ ಆದೇಶ ವಾಪಸು ಪಡೆಯಬೇಕು ಎಂದು ಗಣೇಶ್ ಬೆಂಬಲಿಗರು ಒತ್ತಾಯಿಸಿದರು.
ಕಂಪ್ಲಿಯಿಂದ ಬಂದಿದ್ದ ಗಣೇಶ್ ಬೆಂಬಲಿಗರು ಮೊದಲು ಸಿದ್ದರಾಮಯ್ಯ ನಿವಾಸ ‘ಕಾವೇರಿ’ ತೆರಳಿ ಒತ್ತಡ ಹಾಕಿದರು. ಬಳಿಕ ಕೆಪಿಸಿಸಿ ಕಚೇರಿಗೆ ತೆರಳಿ ಪಕ್ಷದ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದರು.
‘ಗಣೇಶ್ ವಿರುದ್ಧ ಪಿತೂರಿ ನಡೆಯುತ್ತಿದೆ. ಅವರು ಕಾಂಗ್ರೆಸ್ ತ್ಯಜಿಸಿ ಎಲ್ಲೂ ಹೋಗುವುದಿಲ್ಲ. ಅನಗತ್ಯವಾಗಿ ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಅಮಾನತು ಆದೇಶ ವಾಪಸು ಪಡೆಯಿರಿ’ ಎಂದು ಒತ್ತಾಯಿಸಿದರು.
ಬೆಂಬಲಿಗರ ಮನವಿ ಆಲಿಸಿದ ದಿನೇಶ್, ‘ಈಗ ಅಮಾನತು ಆದೇಶ ಹೊರಡಿಸಿದ್ದೇವೆ. ಆದರೆ, ಘಟನೆ ಬಗ್ಗೆ ವಿಚಾರಣೆಗೆ ಸಮಿತಿ ರಚಿಸಿದ್ದೇವೆ. ಶೀಘ್ರದಲ್ಲೇ ಸಮಿತಿ ವರದಿ ನೀಡಲಿದೆ. ವರದಿ ನೋಡಿಕೊಂಡು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸಮಾಧಾನಪಡಿಸಿದರು.
ಆದರೆ, ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಬೆಂಬಲಿಗರು ಮುಂದಾದರು. ಆದರೆ, ಅವಕಾಶ ಸಿಗಲಿಲ್ಲ.