ತುಮಕೂರು: ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ‘ಬಾಗಿನ ಮತ್ತು ಬಾಡೂಟ’ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿವೆ.
ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜೇಶ್ಗೌಡ ಅವರು ಶುಕ್ರವಾರ ತಾಲ್ಲೂಕಿನ ಮಾರ್ಕೋನಹಳ್ಳಿ ಕ್ರಾಸ್ನ ಸಂಕ್ರಾಂತಿ ಗುಡ್ಡದ ಬಳಿ ಸ್ತ್ರೀಶಕ್ತಿ ಸಮಾವೇಶ ನಡೆಸಿ ಐದು ಸಾವಿರ ಮಹಿಳೆಯರಿಗೆ ಬಾಗಿನ ಮತ್ತು ಬಾಡೂಟದ ವ್ಯವಸ್ಥೆ ಮಾಡಿದ್ದರು. ಕಳೆದ ಶುಕ್ರವಾರವೂ ಸಂತೇಪೇಟೆಯಲ್ಲಿ ಇದೇ ರೀತಿ ಕಾರ್ಯಕ್ರಮ ಮಾಡಿದ್ದರು.
ಈ ಕ್ಷೇತ್ರದಲ್ಲಿ ರಾಜೇಶ್ಗೌಡ, ಡಿ. ಕೃಷ್ಣಕುಮಾರ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಮೂವರು ವಿವಿಧ ರೀತಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಪಿಎಲ್ಡಿ ಬ್ಯಾಂಕ್ ರಾಜ್ಯ ಘಟಕದ ಅಧ್ಯಕ್ಷ, ಮೂರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿರುವ ಮುಖಂಡ ಡಿ. ಕೃಷ್ಣಕುಮಾರ್ ಪಂಚಾಯಿತಿವಾರು ಜನ ಸಂಕಲ್ಪ ಯಾತ್ರೆ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಮೂರು ಸಾವಿರ ಹಾಲು ಉತ್ಪಾದಕರಿಗೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದರು.