ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಸ್ತಿಗಳಿಂದ ಬಿಬಿಎಂಪಿಗೆ ಬಾಕಿ ಇರುವ ತೆರಿಗೆಯನ್ನು ಒಂದು ಬಾರಿ ತೀರುವಳಿ ಯೋಜನೆಯಡಿ ವಸೂಲಿ ಮಾಡುವ ಅವಧಿಯನ್ನು 6 ತಿಂಗಳ ಅವಧಿಗೆ ವಿಸ್ತರಿಸಲು ಗುರುವಾರ ನಡೆದ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂದೀಯ ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಎಚ್ಎಎಲ್ನಿಂದ ₹91.50 ಕೋಟಿ, ಎಚ್ಎಂಟಿಯಿಂದ ₹3.79 ಕೋಟಿ ಬಾಕಿ ಸಂಗ್ರಹಿಸಲಾಗಿದೆ. ಇದೇ ರೀತಿ ಹಲವು ಸರ್ಕಾರಿ ಸಂಸ್ಥೆಗಳ ಸ್ವತ್ತುಗಳಿಂದ ಬಾಕಿ ಉಳಿದಿದೆ. ಇದರ ಮೊತ್ತ ಸಾವಿರಾರು ಕೋಟಿ ಆಗಬಹುದು. 2024 ರ ಜೂನ್ 30 ರವರೆಗೆ ಒಂದು ಬಾರಿ ಪರಿಹಾರ ಯೋಜನೆ ವಿಸ್ತರಿಸಲಾಗಿದೆ ಎಂದರು.
136 ಸಂಚಾರಿ ಸಿಗ್ನಲ್ ಉನ್ನತೀಕರಣ: ಬೆಂಗಳೂರು ನಗರ ಸಂಚಾರ ವಿಭಾಗ ವ್ಯಾಪ್ತಿಯಲ್ಲಿರುವ 136 ಸಂಚಾರಿ ಸಿಗ್ನಲ್ ವ್ಯವಸ್ಥೆಗಳನ್ನು ಉನ್ನತೀಕರಿಸಲು ಮತ್ತು ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣಕ್ಕೆ ಸಿಂಕ್ರೊನೈಸೇಶನ್ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
29 ಸ್ಥಳಗಳಲ್ಲಿ ಹೊಸ ಅಡಾಪ್ಟಿವ್ ಸಂಚಾರ ವ್ಯವಸ್ಥೆ ನಿಯಂತ್ರಣ ಘಟಕಗಳು 5 ವರ್ಷಗಳ ಅವಧಿಗೆ ನಿರ್ವಹಿಸಲಿವೆ. ಇದಕ್ಕೆ ₹58.54 ಕೋಟಿ ವೆಚ್ಚವಾಗಲಿದೆ. ಇಂಟರ್ ಸೆಕ್ಷನ್ಗಳಲ್ಲಿ ವಾಹನಗಳ ಚಾಲನೆ ಸುಗಮವಾಗಲಿದೆ. ದಟ್ಟಣೆ ಕಡಿಮೆಗೊಳಿಸಲು ಸಹಾಯಕವಾಗಲಿದೆ ಎಂದರು.
ಬಿಎಂಟಿಸಿಗೆ 20 ವಿದ್ಯುತ್ ಚಾಲಿತ ಬಸ್ಗಳನ್ನು ಜೆಸಿಸಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲು ಸಂಪುಟ ಒಪ್ಪಿಗೆ ನೀಡಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.