ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ವಸಂತ ಕುಮಾರ್ ನಿಧನ

Published 24 ಜನವರಿ 2024, 14:00 IST
Last Updated 24 ಜನವರಿ 2024, 14:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್.ವಿ. ವಸಂತ ಕುಮಾರ್ (91) ಬುಧವಾರ ಬೆಳಗ್ಗೆ ಜಯನಗರ 7ನೇ ಬ್ಲಾಕ್‌ನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. ಮಧ್ಯಾಹ್ನ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಪುತ್ರಿ ವಾಣಿ ಅವರ ಪತಿ ಎಚ್‌.ಸತೀಶ್‌ ಅವರು ಸದ್ಯ ನಗರದ ಎಸಿಎಂಎಂ ಕೋರ್ಟ್‌ನಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿದ್ದಾರೆ.

ವಸಂತ ಕುಮಾರ್‌ ಅವರು 1933ರ ಮೇ 1ರಂದು ಜನಿಸಿದ್ದರು. ಬೆಂಗಳೂರಿನ ಸೆಂಟ್ರಲ್‌ ಕಾಲೇಜು ಮತ್ತು ಸರ್ಕಾರಿ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದರು. 1955ರ ಸೆಪ್ಟೆಂಬರ್ 7ರಂದು ವಕೀಲರಾಗಿ ಸನ್ನದು ನೋಂದಣಿ ಮಾಡಿಸಿದ್ದ ಅವರು, ಹಿರಿಯ ವಕೀಲ ವಿ.ಕೃಷ್ಣಮೂರ್ತಿ ಅವರಲ್ಲಿ ಕಿರಿಯ ವಕೀಲರಾಗಿ ವೃತ್ತಿ ಆರಂಭಿಸಿದ್ದರು. 1991ರ ಡಿಸೆಂಬರ್‌ 9ರಂದು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ನಿವೃತ್ತಿ ನಂತರ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

‘ಅತ್ಯಂತ ಗೌರವಾನ್ವಿತ ಮತ್ತು ಸರಳ ಸಜ್ಜನರಾಗಿದ್ದ ವಸಂತ ಕುಮಾರ್ ಒಬ್ಬ ಸಹೃದಯಿಯಾಗಿದ್ದರು. ಪಂಪನ ಪ್ರಸಿದ್ಧ ನುಡಿಯಂತೆ; ಮಾನವ ಜಾತಿ ತಾನೊಂದೆ ವಲಂ ಎಂಬ ಮಾತಿಗೆ ಸಾಕ್ಷಿಯಾಗಿ ಬದುಕಿದರು. ಕರ್ನಾಟಕ ಜೈನ ಭವನ ಅಸ್ತಿತ್ವಕ್ಕೆ ಬರುವಲ್ಲಿ ಅವರ ಕೊಡುಗೆ ಅನನ್ಯ. ಕರ್ನಾಟಕ ಜೈನ ಅಸೋಸಿಯೇಷನ್‌ನ ಕಾನೂನು ಕೋಶದ ಅಧ್ಯಕ್ಷರಾಗಿದ್ದರು. ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಯಿಂದ ಜೈನರನ್ನು ಹೊರಗಿರಿಸುವಲ್ಲಿ ಶ್ರಮ ವಹಿಸಿದ್ದರು. ಎಲೆ ಮರೆಯ ಕಾಯಿಯಂತೆ ಇದ್ದ ಅವರ ಸಮಾಜ ಸೇವೆ ಅಗಣಿತವಾದುದು‘ ಎಂದು ಕರ್ನಾಟಕ ಜೈನ ಅಸೋಸಿಯೇಷನ್‌ ಮಾಜಿ ಅಧ್ಯಕ್ಷರೂ ಆದ ಎಸ್‌. ಜಿತೇಂದ್ರ ಕುಮಾರ್‌ ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT