ಬೆಂಗಳೂರು: ಪಕ್ಷದ ವರಿಷ್ಠರು ಪೂರ್ಣ ಸ್ವಾತಂತ್ರ್ಯ ನೀಡಿದ್ದು, ಮೂರು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ವರಿಷ್ಠರು ಸಚಿವ ಸಂಪುಟ ವಿಸ್ತರಣೆ ಸೇರಿದಂತೆ ಎಲ್ಲ ವಿಚಾರದಲ್ಲೂ ನನಗೆ ಮುಕ್ತ ಅವಕಾಶ ನೀಡಿದ್ದಾರೆ ಎಂದು ಹೇಳಿದರು.
ಉಪ ಚುನಾವಣೆಯಲ್ಲಿ 15ಕ್ಷೇತ್ರಗಳನ್ನು ಗೆಲ್ಲುವ ಸವಾಲು ಇದೆ. ಗೆದ್ದೇ ಗೆಲ್ಲುತ್ತೇವೆ ಎಂದರು.
ಜೆಡಿಎಸ್ ಬೆಂಬಲದ ಕುರಿತು ಪ್ರಶ್ನೆಗೆ, ಆ ಸಂದರ್ಭ ಬಂದಾಗ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.
ಬರ ನಿರ್ವಹಣೆ, ನೆರೆ ಪರಿಹಾರದ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿ ಒತ್ತು ನೀಡಲಾಗುವುದು. ಪಕ್ಷದ ವರಿಷ್ಠರು ನನಗೆ ಮುಕ್ತ ಅವಕಾಶ ನೀಡಿದ್ದು, ಮೂರೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುವ ವಿಶ್ವಾಸವಿದೆ ಎಂದುತಿಳಿಸಿದರು.
ಶಾಲಾ ಪಠ್ಯದಲ್ಲಿ ಟಿಪ್ಪುವಿಗೆ ಸಂಬಂಧಪಟ್ಟ ವಿಷಯವನ್ನು ಶೇ. 101ರಷ್ಟು ತೆಗೆದು ಹಾಕುವುದಾಗಿ ಹೇಳಿದ ಯಡಿಯೂರಪ್ಪ ಅವರು, ಬಳಿಕ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.