ಬೆಂಗಳೂರು: ಆರ್ಥಿಕವಾಗಿ ದುರ್ಬಲರಾದ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸದನ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿಧಾನಪರಿಷತ್ನಲ್ಲಿ ಮಂಗಳವಾರ ಪದೇ ಪದೇ ಧರಣಿ ನಡೆಯಿತು.
ಬೆಳಿಗ್ಗೆ ಕಲಾಪ ಆರಂಭವಾಗುತ್ತಲೇ ಸಭಾಪತಿಗಳ ಪೀಠದ ಮುಂಭಾಗಕ್ಕೆ ಧಾವಿಸಿದ ವಿರೋಧ ಪಕ್ಷಗಳ ಸದಸ್ಯರು, 'ಲೂಟಿ ಲೂಟಿ ₹ 150 ಕೋಟಿ' ಎಂದು ಘೋಷಣೆ ಕೂಗಿದರು. ಆಗ, ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು.
ಮತ್ತೆ ಕಲಾಪ ಆರಂಭವಾದಾಗಲೂ ಧರಣಿ ಮುಂದುವರಿದ ಕಾರಣ ಕಲಾಪವನ್ನು ಒಂದು ಗಂಟೆ ಕಾಲ ಮುಂದೂಡಲಾಯಿತು. ಮತ್ತೊಮ್ಮೆ ಕಲಾಪ ಆರಂಭವಾದಾಗಲೂ ಧರಣಿ ಮುಂದುವರಿಯಿತು. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಉತ್ತರ ಕೊಡಲು ಮುಂದಾದರೂ ಅದನ್ನು ಕೇಳಿಸಿಕೊಳ್ಳಲು ವಿರೋಧ ಪಕ್ಷದ ಸದಸ್ಯರು ಸಿದ್ಧರಿರಲಿಲ್ಲ.
ಪ್ರತಿಭಟನೆಯ ನಡುವೆಯೇ ಕೊರೊನಾ ಬಗ್ಗೆ ಹೇಳಿಕೆ ನೀಡಲು ಅವಕಾಶ ನೀಡಲಾಯಿತು.
ಕೊರೊನಾ ಬಗ್ಗೆ ಸರ್ಕಾರದ ಹೇಳಿಕೆಯಿಂದ ತೃಪ್ತರಾಗದ ಸದಸ್ಯರು 'ಗೋವಿಂದಾ' ಘೋಷಣೆ ಕೂಗಿದ್ದರಿಂದ ಮತ್ತೆ ಕಲಾಪ ಮುಂದೂಡಲಾಯಿತು. ಮತ್ತೆ ಸದನ ಸೇರಿದಾಗ ಧನವಿನಿಯೋಗ ಮಸೂದೆಯನ್ನು ಮಂಡಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವಕಾಶ ನೀಡಲಾಯಿತು.
ಲ್ಯಾಪ್ ಟಾಪ್ ಹಗರಣದ ತನಿಖೆಯನ್ನು ಸದನ ಸಮಿತಿಯಿಂದ ನಡೆಸಬೇಕು ಎಂದು ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು. ಧರಣಿ ಮುಂದುವರಿದಿರುವಂತೆಯೇ ಸಭಾಪತಿ ಅವರು ಕಲಾಪದ ವರದಿ ನೀಡಿ ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು.