ವಿಜಯಪುರ: ‘ಡಿಸಿಸಿ ಬ್ಯಾಂಕುಗಳಿಗೆ ಕಡಿಮೆ ಬಡ್ಡಿದರದಲ್ಲಿ ಕೇಂದ್ರ ಸರ್ಕಾರವು ನಬಾರ್ಡ್ ಮೂಲಕ ಒದಗಿಸುತ್ತಿದ್ದ ಸಾಲಸೌಲಭ್ಯವನ್ನು ಸಕಾಲಕ್ಕೆ ನೀಡದೇ ವಿಳಂಬ ತೋರುತ್ತಿರುವ ಕಾರಣ ರೈತರಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕುಗಳಿಗೆ ಆರ್ಥಿಕ ಒತ್ತಡ ಹೆಚ್ಚಾಗಿದೆ. ಇದರ ಬಗ್ಗೆ ಪ್ರಧಾನಿ ಮತ್ತು ನಬಾರ್ಡ್ಗೆ ಪತ್ರ ಬರೆದು, ಶೀಘ್ರ ಸಾಲ ಒದಗಿಸಲು ಕೋರುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನ ಆವರಣದಲ್ಲಿ ಸೋಮವಾರ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ರಾಜ್ಯದ ವಿವಿಧ ಜಿಲ್ಲೆಯ 70 ಸಾಧಕರಿಗೆ ‘ಸಹಕಾರ ರತ್ನ’ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
‘ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿ ತೊಡಗಿಸುವ ಬಗ್ಗೆ ಪರಿಶೀಲಿಸಲಾಗುವುದು. ಸಹಕಾರ ಕ್ಷೇತ್ರಕ್ಕೆ ಜಾತಿ, ಧರ್ಮದ ಸೋಂಕು ಇಲ್ಲ. ಸಹಕಾರಿಗಳು ಸಾಮಾಜಿಕವಾಗಿ, ಆರ್ಥಿಕವಾಗಿ ಬೆಳೆಯುತ್ತಿದ್ದಾರೆ’ ಎಂದರು.
ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದೇಶದಲ್ಲ 8.5 ಲಕ್ಷ ಸೊಸೈಟಿ, ಕರ್ನಾಟಕದಲ್ಲಿ 45,600 ಸೊಸೈಟಿಗಳಿವೆ. ಒಟ್ಟು 35 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ’ ಎಂದರು.
ಸಮಿತಿ ರಚನೆ:
ಸಹಕಾರ ಸಚಿವ ಕೆ. ಎನ್.ರಾಜಣ್ಣ ಮಾತನಾಡಿ, ‘ರಾಜ್ಯದಲ್ಲಿ ಸಹಕಾರ ಕ್ಷೇತ್ರವನ್ನು ಗಟ್ಟಿಗೊಳಿಸುವಿಕೆಗೆ ಸಂಬಂಧಿಸಿದಂತೆ ಶಾಸಕ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಹಕಾರಿಗಳ ಸಮಿತಿ ರಚಿಸಲಾಗಿದ್ದು, ಸಮಿತಿ ನೀಡುವ ವರದಿ ಆದರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದರು.
ಪ್ರೋತ್ಸಾಹ ಅಗತ್ಯ:
ಕೃಷಿ ಮಾರುಕಟ್ಟೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಮಹಾರಾಷ್ಟ್ರ, ಗುಜರಾತ್ ನಲ್ಲಿ ಸಹಕಾರ ಚಳವಳಿಗೆ ಶಕ್ತಿ ಕೊಟ್ಟಿರುವುದರಿಂದ ಉನ್ನತ ಸ್ಥಾನಕ್ಕೆ ಏರಿಕೆಯಾಗಿದೆ. ಅದೇ ಮಾದರಿಯಲ್ಲಿ ಸಹಕಾರ ಕ್ಷೇತ್ರಕ್ಕೆ ರಾಜ್ಯ ಸರ್ಕಾರದ ನೆರವು, ಪ್ರೋತ್ಸಾಹದ ಅಗತ್ಯವಿದೆ’ ಎಂದರು.
ವಿಜಯಪುರದಲ್ಲಿ ಸೋಮವಾರ ನಡೆದದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜನ