ಬೆಂಗಳೂರು: ‘ಸಿದ್ದರಾಮಯ್ಯ ಇರಲಿ, ಡಿ.ಕೆ. ಶಿವಕುಮಾರ್ ಇರಲಿ.. ಪಕ್ಷದ ನಿರ್ಣಯವನ್ನು ಎಲ್ಲರೂ ಪಾಲಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಾತಿಗಣತಿಗೆ ಸ್ವಪಕ್ಷೀಯರೇ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಎಐಸಿಸಿ ಮಟ್ಟದಿಂದ ನಾನು ಈ ಮಾತು ಹೇಳುತ್ತಿದ್ದೇನೆ. ಮುಂದೆ ಪಕ್ಷಕ್ಕೆ ಯಾರೇ ಬಂದರೂ ಇದನ್ನು ಪಾಲಿಸಬೇಕು’ ಎಂದರು.
‘ಇಂಡಿಯಾ’ದಡಿ ಸ್ಪರ್ಧೆ:
‘ಈ ಚುನಾವಣೆಯಲ್ಲಿ ನಾವು (ಕಾಂಗ್ರೆಸ್) ‘ಇಂಡಿಯಾ’ ಮೈತ್ರಿಕೂಟದ ಅಡಿ ಸ್ಪರ್ಧಿಸುತ್ತೇವೆ. ಕೆಲವು ರಾಜ್ಯಗಳಲ್ಲಿ ಸೀಟು ಹಂಚಿಕೆಯಾಗಿದೆ’ ಎಂದು ಖರ್ಗೆ ಹೇಳಿದರು.
‘ತಮಿಳುನಾಡಿನಲ್ಲಿ ನಾವು 10 ಸೀಟು ಪಡೆದಿದ್ದೇವೆ. ದೆಹಲಿಯಲ್ಲಿ ಆಪ್ ಜೊತೆ ಒಪ್ಪಂದ ಆಗಿದೆ. ಉತ್ತರಪ್ರದೇಶದಲ್ಲೂ ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಮಹಾರಾಷ್ಟ್ರದಲ್ಲಿ ಸುಮಾರು 19 ಸೀಟು ಗೆಲ್ಲುವ ವಿಶ್ವಾಸವಿದೆ’ ಎಂದರು.
‘ನಮ್ಮವರು ಇಂದು ಕೂಡಾ ಮೈತ್ರಿ ಚರ್ಚೆ ಮುಂದುವರಿಸಿದ್ದಾರೆ. ಎಲ್ಲ ಕಡೆಗಳಲ್ಲೂ ಬಹುತೇಕ ಹೊಂದಾಣಿಕೆ ಆಗಿದೆ. ಕೆಲವು ಕಡೆ ಸ್ವಲ್ಪ ಸಮಸ್ಯೆ ಇದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ’ ಎಂದರು.
‘ನಿಮ್ಮ ಸ್ಪರ್ಧೆ ಎಲ್ಲಿಂದ?’ ಎಂಬ ಪ್ರಶ್ನೆಗೆ ‘ರಾಜ್ಯದ ಮಟ್ಟಿಗೆ ರಾಜ್ಯ ನಾಯಕರೇ ನಿರ್ಣಯ ಮಾಡಬೇಕು. ನನ್ನ ಸ್ಪರ್ಧೆ ಬಗ್ಗೆ ಇಲ್ಲಿ ಕೇಳಿ’ ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕಡೆ ತೋರಿಸಿ ಖರ್ಗೆ ಹೇಳಿದರು.