ಕೂಡಲಸಂಗಮ: ‘ಆಪರೇಷನ್ ಕಮಲದ ಆಡಿಯೊ ಟೇಪ್ ವಿಚಾರದಲ್ಲಿ ಯಡಿಯೂರಪ್ಪ ಅವರನ್ನು ಬಲಿಪಶು ಮಾಡಲಾಗಿದೆ. ವೈದಿಕ ಮನಸ್ಸುಗಳ ಕುತಂತ್ರಕ್ಕೆ ಸಿಲುಕಿ ಅವರು ದುರಂತ ನಾಯಕರಾಗಿದ್ದಾರೆ’ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಬಸವಣ್ಣನವರ ವಚನಗಳನ್ನು ಹೇಳಿ ಲಿಂಗಾಯತರನ್ನು ಸಂಪ್ರೀತಗೊಳಿಸುತ್ತ, ಯಡಿಯೂರಪ್ಪನವರ ಮೂಲಕ ಶಾಸಕರನ್ನು ಪಕ್ಷಾಂತರ ಮಾಡಿಸುವ ಕೆಟ್ಟ ಕೆಲಸ ಮಾಡಿಸಲಾಗಿದೆ. ಅವರು ಇಡೀ ಜೀವನದಲ್ಲಿ ಗಳಿಸಿಕೊಂಡ ಕೀರ್ತಿ ಇದರಿಂದ ಮಣ್ಣುಪಾಲು ಆಗಿರುವುದನ್ನು ಕಂಡು ಮರುಕವೆನ್ನಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಲಿಂಗಾಯತ ಸಮುದಾಯ ನಾಚಿಕೆಯಿಂದ ತಲೆತಗ್ಗಿಸಬೇಕಾದ ಆಡಿಯೊ ಪ್ರಸಂಗದ ಹಿಂದೆ ಕೇವಲ ಯಡಿಯೂರಪ್ಪನವರ ಪಾತ್ರವಷ್ಟೇ ಇಲ್ಲ. ಅವರನ್ನು ಸೂತ್ರದ ಬೊಂಬೆಯಂತೆ ಆಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಪಾಲೂ ಇದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.