ಬೆಂಗಳೂರು:ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರುಗುರುವಾರ ಮಧ್ಯಾಹ್ನ 3.30ರ ಸುಮಾರಿಗೆನಗರದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಶ್ವಾಸಕೋಶ ಸೋಂಕಿಗೆ ಬಾಗಲಕೋಟೆಯ ಕೆರೂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 9ರಂದು ಬೆಂಗಳೂರಿಗೆ ಕರೆ ತಂದು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ರಕ್ತದೊತ್ತಡ, ಮಧುಮೇಹ,ಮೂತ್ರಕೋಶದ ತೊಂದರೆ, ಶ್ವಾಸಕೋಶದ ಸಮಸ್ಯೆ ಸೇರಿದಂತೆ ಬಹು ಅಂಗಾಂಗಗಳ ವೈಫಲ್ಯದಿಂದ ಅವರು ಬಳಲುತ್ತಿದ್ದರು.
ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಹಿನ್ನೆಲೆಯಲ್ಲಿ ಕಳೆದ ವರ್ಷ ದೆಹಲಿಗೆ ತೆರಳಿದ್ದ ಅವರು 25 ದಿನ ಅಲ್ಲಿಯೇ ತಂಗಿದ್ದರು. ಹವಾಮಾನ ವೈಪರಿತ್ಯದಿಂದ ಅಲ್ಲಿ ತೀವ್ರ ಅಸ್ವಸ್ಥಗೊಂಡ ಅವರನ್ನು ಜನವರಿ 2ರಂದು ಏರ್ ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ಆಶ್ರಮಕ್ಕೆ ಕರೆತರಲಾಗಿತ್ತು. ಮರುದಿನ ಆಸ್ಪತ್ರೆಗೆ ದಾಖಲಿಸಿ ಕೆಲವು ದಿನಗಳ ವರೆಗೆ ಚಿಕಿತ್ಸೆ ನೀಡಲಾಗಿತ್ತು.
1996ರಲ್ಲಿ ಪ್ರಕಟಿಸಲಾಗಿದ್ದ ’ಬಸವ ವಚನ ದೀಪ್ತಿ’ ಪುಸ್ತಕವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ಈ ಸಂಬಂಧ ಹೈ ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಾತೆ ಮಹಾದೇವಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.
ಬಸವಣ್ಣನವರ 800ನೇ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಅವರ ವಚನಗಳು ಶುದ್ಧೀಕರಣಗೊಂಡ ಆವೃತ್ತಿಯಾಗಿ’ಬಸವ ವಚನ ದೀಪ್ತಿ’ ಗ್ರಂಥವನ್ನು ಪ್ರಕಟಿಸಲಾಗಿತ್ತು. 1998ರಲ್ಲಿ ರಾಜ್ಯ ಸರ್ಕಾರ ಈ ಗ್ರಂಥವನ್ನು ನಿಷೇಧಿಸಿ, ಮುಟ್ಟುಗೋಲು ಹಾಕಿಕೊಂಡಿತ್ತು.