ಬೆಂಗಳೂರು: ವೇತನ ಪರಿಷ್ಕರಣೆ, ಬಡ್ತಿ ಸಂಬಂಧಿಸಿದಂತೆ 10 ದಿನಗಳಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ನೀಡಲಾಗುವುದು ಎಂದು ಗೃಹ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಪೊಲೀಸರ ವೇತನ ತಾರತಮ್ಯ ಕುರಿತು ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದಕರ ನೀಡಿರುವ ವರದಿ ಅನುಷ್ಠಾನದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರು.
ಬಳಿಕ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬೇರೆ ಇಲಾಖೆ ಹಾಗೂ ಪಕ್ಕದ ರಾಜ್ಯಗಳ ನೌಕರರ ವೇತನ ಹಾಗೂ ರಾಜ್ಯದ ಪೊಲೀಸರ ವೇತನದ ಮಧ್ಯೆ ಇರುವ ತಾರತಮ್ಯ ಹೋಗಲಾಡಿಸುವ ಬಗ್ಗೆ ಔರಾದಕರ ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚೆ ನಡೆಯಿತು. ಪೊಲೀಸ್ ಸಿಬ್ಬಂದಿಗೆ ಬಡ್ತಿ ನೀಡುವ ಕುರಿತು ಚರ್ಚೆಯಾಗಿದೆ ಎಂದರು.
ವೇತನ ಹೆಚ್ಚಳ ಮಾಡಿದರೆ ಹೆಚ್ಚುವರಿಯಾಗಿ ₹600 ಕೋಟಿ ಬೇಕಾಗುತ್ತದೆ. ಈ ಬಗ್ಗೆ ಚರ್ಚಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.