‘ರಾತ್ರಿ 12 ಗಂಟೆ ಸಮಯದಲ್ಲಿ ಬೀಡಿ ಕಟ್ಟುತ್ತಿದ್ದೆ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕಾಂಪೌಂಡ್ ಪಕ್ಕದಲ್ಲಿದ್ದ ಈರಣ್ಣ ಅವರ ಮನೆಗೆ ಬೆಂಕಿ ಹತ್ತಿದ್ದು, ತಕ್ಷಣ ಜೋರಾಗಿ ಕೂಗಿಕೊಂಡು ಎಲ್ಲರನ್ನು ಎಬ್ಬಿಸಿದೆ. ಬೆಂಕಿ ಕ್ಷಣಮಾತ್ರದಲ್ಲಿ ಎಲ್ಲ ಕಡೆ ಹರಡಿತು. ಮನೆಯಲ್ಲಿದ್ದ ಏನನ್ನೂ ಹೊರಗೆ ತರಲು ಆಗಲಿಲ್ಲ. ಅಷ್ಟರಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು, ಅದರ ತುಣುಕೊಂದು ಶೌಕತ್ ಅವರ ಬೆನ್ನಿನ ಕೆಳಭಾಗಕ್ಕೆ ಬಡಿದು ಗಂಭೀರ ಗಾಯಗೊಂಡಿದ್ದಾರೆ’ ಎಂದು ಬಡಾವಣೆಯ ನಿವಾಸಿ ತಾಜುನ್ನೀಸಾ ತಿಳಿಸಿದರು.