ಮೊಹರಂ ಬಂತೆಂದರೆ ಶಿಕಾರಿಪುರ ಪಟ್ಟಣದ ಮಾಸೂರು ಸರ್ಕಲ್, ಮೇದಾರಕೇರಿ, ತೇರುಬೀದಿಯ ಮಸೀದಿ ಸಮೀಪ, ದೊಡ್ಡಪೇಟೆ, ಹೊಸಕೇರಿ, ಗಗ್ರಿ ಬಡಾವಣೆ ಸೇರಿದಂತೆ ವಿವಿಧೆಡೆ ಸಂಭ್ರಮ ಗರಿಗೆದರುತ್ತದೆ. ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ಅಲಾಬಿ (ಪಂಜಾ) ದೇವರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲೂ ಈ ಸಂಪ್ರದಾಯ ಪಾಲನೆಯಾಗುತ್ತಿದೆ. ಬಗನಕಟ್ಟೆ ಗ್ರಾಮದಲ್ಲಿ ಮುಸ್ಲಿಮರೇ ಇಲ್ಲ. ಹಾಗಿದ್ದರೂ ಅಲ್ಲಿ ಹಿಂದೂಗಳೇ ಅಲಾಬಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುತ್ತಾರೆ.