ಬೆಂಗಳೂರು: ‘ಎಲ್ಲಾ ಉದ್ಯಮ ಸಂಸ್ಥೆಗಳೂ ಕನ್ನಡ ಕಾಳಜಿ ಮೆರೆಯಬೇಕು. ಹಾಗಾದಾಗ ಮಾತ್ರ ಭಾಷೆಯ ಉಳಿವು ಹಾಗೂ ಬೆಳವಣಿಗೆಯ ಹಾದಿ ಸುಲಭವಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅಭಿಪ್ರಾಯಪಟ್ಟರು.
ಮುಳಿಯ ಪ್ರತಿಷ್ಠಾನವು ಕರ್ನಾಟಕ ಲೇಖಕಿಯರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಮನೆ–ಮನದಲ್ಲಿ ಕನ್ನಡ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಭಾಷೆಯು ಭಾಷಣದ ವಸ್ತುವಲ್ಲ. ಅದು ಸಂಸ್ಕೃತಿಯ ಪ್ರತಿಬಿಂಬ. ದೇಶದಲ್ಲಿ ಕನ್ನಡದಷ್ಟು ಶ್ರೀಮಂತ ಭಾಷೆ ಮತ್ತೊಂದಿಲ್ಲ. ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಮಾತಾಡ್ ಮಾತಾಡ್ ಕನ್ನಡ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕನ್ನಡಿಗರಲ್ಲಿರುವ ಭಾಷಾಭಿಮಾನಕ್ಕೆ ಇದು ಸಾಕ್ಷಿ’ ಎಂದರು.
ಸಾಹಿತಿ ಕಮಲಾ ಹಂಪನಾ, ‘ಹಿಂದಿ ರಾಷ್ಟ್ರಭಾಷೆಯಲ್ಲ. ಕನ್ನಡ ಸಹಿತ ದೇಶದ 23 ಭಾಷೆಗಳೂ ರಾಷ್ಟ್ರಭಾಷೆಗಳೇ. ಹೀಗಿದ್ದೂ ಹಿಂದಿ ಹೇರಿಕೆಗೆ ಮುಂದಾದರೆ ಅದಕ್ಕೆ ಪ್ರತಿರೋಧ ತೋರಲೇಬೇಕಾಗುತ್ತದೆ’ ಎಂದು ಹೇಳಿದರು.
ಶಿಕ್ಷಣ ತಜ್ಞೆ ಗೀತಾ ರಾಮಾನುಜಮ್, ಸಾಹಿತಿ ಭುವನೇಶ್ವರಿ ಹೆಗಡೆ, ಮುಳಿಯ ಆಭರಣ ಸಂಸ್ಥೆಯ ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್, ಸಾಹಿತಿ ನಾ.ದಾಮೋದರ ಶೆಟ್ಟಿ ಹಾಗೂ ನೀರಜ್ ಪಾಟೀಲ್ ಇದ್ದರು.