ವಿಜಯಪುರ: ಕಾಂಗ್ರೆಸ್ ನಾಯಕಿ ರೇಷ್ಮಾ ಪಡೇಕನೂರ ಕೊಲೆಯಾಗಿದೆ. ಕೊಲ್ಹಾರ ಸೇತುವೆ ಬಳಿ ಶುಕ್ರವಾರ ಶವ ಪತ್ತೆಯಾಗಿದೆ.
ಗುರುವಾರ ರಾತ್ರಿ ದುಷ್ಕರ್ಮಿಗಳು ಕೊಲೆ ಎಸಗಿ, ಶವವನ್ನು ಸೇತುವೆ ಮೇಲಿನಿಂದ ಕೆಳಗೆ ಎಸೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
‘ರೇಷ್ಮಾ ಪಡೇಕನೂರ ಸೊಲ್ಲಾಪುರದ ಎಂಐಎಂ ಮುಖಂಡರೊಬ್ಬರ ಜತೆ ಒಡನಾಟ ಹೊಂದಿದ್ದರು. ಈ ವಿಷಯವಾಗಿ ಈ ಹಿಂದೊಮ್ಮೆ ಎಂಐಎಂ ಮುಖಂಡನ ಪತ್ನಿ ರೇಷ್ಮಾ ಮನೆ ಬಳಿ ರಂಪಾಟ ನಡೆಸಿದ್ದರು ಎಂಬುದು ಮೂಲಗಳಿಂದ ತಿಳಿದು ಬಂದಿದೆ.
2018ರ ವಿಧಾನಸಭಾ ಚುನಾವಣೆಗೂ ಮುನ್ನ ರೇಷ್ಮಾ ಜೆಡಿಎಸ್ನಲ್ಲಿ ಗುರುತಿಸಿಕೊಂಡಿದ್ದರು. ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಯೂ ನೇರ ಸಂಪರ್ಕ ಹೊಂದಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದರು.
2018ರ ವಿಧಾನಸಭಾ ಚುನಾವಣೆ ಸಂದರ್ಭ ಜೆಡಿಎಸ್ ತೊರೆದು, ಗೃಹ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ, ಸಿದ್ದರಾಮಯ್ಯ ಸಮ್ಮುಖ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಹೊಂದಿರಲಿಲ್ಲ. ಚುನಾವಣೆ ಸಂದರ್ಭ ಮಾತ್ರ ಸಕ್ರಿಯರಾಗಿದ್ದರು.