ಬೆಂಗಳೂರು: ‘ಮುಳುಗುವ ಹಡಗಿಗೆ ಡಿ.ಕೆ.ಶಿವಕುಮಾರ್ ನಾಯಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಆ ಪಕ್ಷದವರೇ ಅವರನ್ನು ಕಾಂಗ್ರೆಸ್ ಮುಕ್ತ ಮಾಡಿಸುತ್ತಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
‘ಶಿವಕುಮಾರ್ ಆರಂಭಶೂರತ್ವ ಮೆರೆದಿದ್ದಾರೆ. ಕೆಲವೇ ದಿನಗಳಲ್ಲಿ ಡಿಕೆಶಿ ಮುಕ್ತ ಕಾಂಗ್ರೆಸ್ ಆಗುತ್ತದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ. ನಮ್ಮದು ಕಾರ್ಯಕರ್ತ ಆಧಾರಿತ ಪಕ್ಷವಾಗಿರುವುದರಿಂದ ಬಿಜೆಪಿ ಮುಕ್ತ ರಾಜ್ಯವಾಗಲು ಸಾಧ್ಯವಿಲ್ಲ’ ಎಂದು ಅವರು ಶನಿವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.
‘ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಪ್ರಧಾನಿ ಅವರು ಇದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶ ಮೊದಲು, ಆಮೇಲೆ ಎಲ್ಲವೂ ಎಂದು ಪ್ರಧಾನಿ ಹೇಳಿದ್ದಾರೆ, ಅದನ್ನು ಪಕ್ಷ ಪಾಲಿಸುತ್ತಿದೆ’ ಎಂದರು.