ಬೆಂಗಳೂರು: ವಾಣಿಜ್ಯ ಕಟ್ಟಡಗಳನ್ನು ಹೊರಗಿಟ್ಟು ವಸತಿ ಕಟ್ಟಡಗಳಿಗೆ ಸೀಮಿತವಾಗಿ ಅಕ್ರಮ–ಸಕ್ರಮ ಯೋಜನೆಯನ್ನು ಜಾರಿಗೊಳಿಸುವಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
‘ನಕ್ಷೆ ಉಲ್ಲಂಘಿಸಿ ಹಾಗೂ ಅನುಮೋದನೆ ಇಲ್ಲದ ಬಡಾವಣೆಗಳಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ದಂಡ ವಿಧಿಸಿ ಸಕ್ರಮಗೊಳಿಸಲು ರೂಪಿಸಿದ್ದ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಉಳಿದಿದೆ. ವಾಣಿಜ್ಯ ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಿ ಯೋಜನೆ ಅನುಷ್ಠಾನಕ್ಕೆ ಅನುಮತಿ ಪಡೆಯಲು ಪ್ರಯತ್ನ ಮಾಡಲಾಗುವುದು’ ಎಂದು ಅವರು ಹೇಳಿದರು.
ನ್ಯಾಯಾಲಯ ಒಪ್ಪಿಗೆ ನೀಡಿದರೆ ತ್ವರಿತವಾಗಿ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿರುವ 2,000 ಚದರ ಅಡಿಗಳವರೆಗಿನ ವಿಸ್ತೀರ್ಣದ ಮನೆಗಳನ್ನೂ ಸಕ್ರಮಗೊಳಿಸಲಾಗುವುದು. ಈ ಯೋಜನೆ ಜಾರಿಯಾದರೆ ಸರ್ಕಾರಕ್ಕೆ ₹ 20,000 ಕೋಟಿ ವರಮಾನ ಸಂಗ್ರಹವಾಗಲಿದೆ ಎಂದು ತಿಳಿಸಿದರು.