ಮೈಸೂರು: ಮಲ್ಪೆಯ ಸಮುದ್ರದಲ್ಲಿ ನಾಪತ್ತೆಯಾಗಿರುವ 7 ಮೀನುಗಾರರನ್ನು ಪತ್ತೆ ಮಾಡಿಕೊಡುವಂತೆ ಒತ್ತಾಯಿಸಿ ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
26 ದಿನಗಳ ಹಿಂದೆ ಮೀನುಗಾರರು ನಾಪತ್ತೆಯಾಗಿದ್ದಾರೆ. ಇದುವರೆಗೂ ಇವರು ಪತ್ತೆಯಾಗಿಲ್ಲ. ಕೂಡಲೇ ಪೊಲೀಸರು, ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಪತ್ತೆಕಾರ್ಯದಲ್ಲಿ ತೊಡಗಬೇಕು. ಮೀನುಗಾರರನ್ನು ರಕ್ಷಿಸುವ ಮೂಲಕ ಅವರ ಕುಟುಂಬಗಳಿಗೆ ಆಸರೆಯಾಗಬೇಕು ಎಂದು ಸಂಘದ ಅಧ್ಯಕ್ಷೆ ಪ್ರೊ.ಎಚ್.ಎಂ.ವಸಂತಮ್ಮ ಒತ್ತಾಯಿಸಿದರು.
ಮೀನುಗಾರರಾದ ಸತೀಶ, ಹರೀಶ, ರಮೇಶ, ದಾಮೋದರ್, ಚಂದ್ರಶೇಖರ್, ರವಿ, ಲಕ್ಷ್ಮಣ್ ಅವರು ಸುವರ್ಣ ತ್ರಿಭುಜ ಎಂಬ ಹಡಗಿನಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದಾರೆ. ಮೀನುಗಾರರ ರಕ್ಷಣೆಯನ್ನು ಆದ್ಯತೆಯಾಗಿ ಸ್ವೀಕರಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಲಿಂಗಸ್ವಾಮಿ, ಖಜಾಂಚಿ ನಾರಾಯಣ ಲೋಲಪ್ಪ, ಸದಸ್ಯರಾದ ರಾಜು, ಮಹದೇವ ಭಾಗವಹಿಸಿದ್ದರು.