ಬೆಂಗಳೂರು: ಪರೀಕ್ಷೆಗೂ ಮುನ್ನವೇ ದ್ವಿತೀಯ ಪಿಯು ರಸಾಯನ ವಿಜ್ಞಾನ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಹಗರಣದ ಎಲ್ಲ 15 ಆರೋಪಿಗಳನ್ನು ನಗರದ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಕುರಿತ ಆದೇಶವನ್ನು ಸಿಟಿ ಸಿವಿಲ್ ಕೋರ್ಟ್ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮುರಳೀಧರ ಪೈ ಗುರುವಾರ ಪ್ರಕಟಿಸಿದ್ದು, ‘ಆರೋಪ ಋಜುವಾತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ಆದೇಶದಲ್ಲಿ ವಿವರಿಸಿದ್ದಾರೆ.
2016ನೇ ಸಾಲಿನ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯ ಈ ಪ್ರಕರಣವನ್ನು ಸಿಐಡಿಯ 13 ಸಹಾಯಕ ತನಿಖಾಧಿಕಾರಿಗಳ ತಂಡ ತನಿಖೆ ನಡೆಸಿತ್ತು. ಪ್ರಾಸಿಕ್ಯೂಷನ್ 126 ಸಾಕ್ಷಿದಾರರನ್ನು ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣದಲ್ಲಿ ಒಂಬತ್ತು ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಅನ್ವಯಿಸಲಾಗಿತ್ತು.
ಮೊದಲ ಆರೋಪಿ ಕುಮಾರಸ್ವಾಮಿ, ಕುಮಾರ ಕಿರಣ್ ಸೇರಿದಂತೆ ಒಟ್ಟು 15 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ಆರೋಪಿಗಳ ಪರವಾಗಿ ಆರ್.ಪಿ.ಚಂದ್ರಶೇಖರ್ ವಾದ ಮಂಡಿಸಿದ್ದರು.