ಬೆಂಗಳೂರು: ‘ಇನ್ನೂ ಕೆಲವರನ್ನು ಉಪ ಮುಖ್ಯಮಂತ್ರಿ ಮಾಡಬೇಕೆಂಬ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಉದ್ದೇಶ ಒಳ್ಳೆಯದು. ಆದರೆ, ಅದನ್ನು ಮಾಡುವುದು, ಬಿಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ರಾಜಣ್ಣ ಹೇಳಿಕೆಯನ್ನು ಸಮರ್ಥಿಸಿ ಮಾತನಾಡಿದ ಅವರು, ‘ರಾಜಣ್ಣ ಕೇಳುವುದರಲ್ಲಿ ತಪ್ಪೇನೂ ಇಲ್ಲ. ಮುಖ್ಯಮಂತ್ರಿ ಹಾಗೂ ಹೈಕಮಾಂಡ್ಗೂ ಈ ಬಗ್ಗೆ ಅವರೇ ತಿಳಿಸಬೇಕು. ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದರೂ ಉದ್ದೇಶ ಒಳ್ಳೆಯದಿದೆ’ ಎಂದರು.
‘ಲೋಕಸಭೆ ಚುನಾವಣೆಗೆ ಮೊದಲು ಎಲ್ಲ ಸಮುದಾಯಗಳಿಗೂ ಅವಕಾಶ ನೀಡುವಂತೆ ಕೇಳಿದ್ದಾರೆ. ಆದರೆ, ಈ ಬಗ್ಗೆ ತೀರ್ಮಾನ ಮಾಡುವವರು, ಬಿಡುವವರು ಎಐಸಿಸಿ ನಾಯಕರು. ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದೂ ಹೇಳಿದರು.
ತನಿಖೆ ಬಳಿಕ ಎಲ್ಲ ಲಿಂಕ್ ಹೊರಬರಲಿದೆ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸಲು ಹಣ ಪಡೆದಿರುವ ಆರೋಪದ ಮೇಲೆ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ ಹಲವರ ಬಂಧನವಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ, ‘ ಅವರೇ ಹಣ ತೆಗೆದುಕೊಂಡಿದ್ದಾರಾ? ಬೇರೆಯವರಿಗೆ ಕೊಟ್ಟಿದ್ದರಾ? ಯಾರೆಲ್ಲಾ ಇದರಲ್ಲಿದ್ದಾರೆ ಎಂಬುದು ತನಿಖೆಯ ಬಳಿಕ ಬಯಲಾಗಲಿದೆ’ ಎಂದರು.
‘ಚೈತ್ರಾ ಕುಂದಾಪುರ ಅವರ ವಿಚಾರದಲ್ಲಿ ಸ್ವಲ್ಪ ಡ್ರಾಮಾ ನಡೆದಿದೆ. ಇಲಾಖೆಯವರು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ. ತನಿಖೆ ನಡೆದು ಎಲ್ಲ ಮಾಹಿತಿ ಹೊರಬರಲಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.