ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಎಸ್‌ಪಿ ಮುಚ್ಚುವ ನಿರ್ಧಾರ ಮರುಪರಿಶೀಲಿಸಿ– ಎಂ.ಬಿ. ಪಾಟೀಲ

Published 11 ಫೆಬ್ರುವರಿ 2024, 15:52 IST
Last Updated 11 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ಬೆಂಗಳೂರು: ‘ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ (ವಿಐಎಸ್‌ಪಿ) ಮುಚ್ಚುವ ನಿರ್ಧಾರ ಮರುಪರಿಶೀಲಿಸಬೇಕು’ ಎಂದು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಪತ್ರ ಬರೆದು ಒತ್ತಾಯಿಸಿದ್ದಾರೆ.

ವಿಐಎಸ್‌ಪಿ ಖಾಸಗೀಕರಣಗೊಳಿಸಲು ಷೇರು ವಿಕ್ರಯಕ್ಕೆ ಮುಂದಾಗಿದ್ದ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್‌) ಪ್ರಯತ್ನವು ವಿಫಲವಾಗಿರುವುದನ್ನು ಸಿಂಧಿಯಾ ಅವರ ಗಮನಕ್ಕೆ ಸಚಿವರು ತಂದಿದ್ದಾರೆ.

1989ರವರೆಗೆ ಕರ್ನಾಟಕದ ಸರ್ಕಾರಿ ವಲಯದ ಉದ್ಯಮವಾಗಿದ್ದ ವಿಐಎಸ್‌ಪಿ, ಇತ್ತೀಚಿನ ವರ್ಷಗಳಲ್ಲಿ ಎಸ್‌ಎಐಎಲ್‌ನ ಅಸಮರ್ಪಕ ಬಂಡವಾಳ ಹೂಡಿಕೆ ನೀತಿಯಿಂದ ಕಾರ್ಯಾಚರಣೆಯ ಸವಾಲುಗಳನ್ನು ಎದುರಿಸುತ್ತಿದೆ. ಮೂರು ದಶಕಗಳಲ್ಲಿ ಉಕ್ಕು ಪ್ರಾಧಿಕಾರದ ಇತರ ಘಟಕಗಳಲ್ಲಿನ ಗಮನಾರ್ಹ ಹೂಡಿಕೆಗೆ ಹೋಲಿಸಿದರೆ, ವಿಐಎಸ್‌ಪಿಯಲ್ಲಿ ದುರಸ್ತಿ ಮತ್ತು ನವೀಕರಣ ಉದ್ದೇಶಗಳಿಗೆ ಕೇವಲ ₹157 ಕೋಟಿ ವೆಚ್ಚ ಮಾಡಲಾಗಿದೆ. ರಾಮದುರ್ಗದಲ್ಲಿನ 497 ಎಕರೆ ಪ್ರದೇಶದಲ್ಲಿನ ಕಬ್ಬಿಣದ ಅದಿರು ಗಣಿಗಳು ಮತ್ತು ಬಳ್ಳಾರಿ ಜಿಲ್ಲೆಯಲ್ಲಿನ ಗಣಿಗಳು ದಶಕಗಳ ಕಾಲ ವಿಐಎಸ್‌ಪಿಗೆ ಅದಿರು ಪೂರೈಸುವ ಸಾಮರ್ಥ್ಯ ಹೊಂದಿವೆ. 2022ರಲ್ಲಿ ನಡೆದಿದ್ದ ವಿಐಎಸ್‌ಪಿಯ ಷೇರು ವಿಕ್ರಯಕ್ಕೆ ಬಿಡ್‌ದಾರರ ನಿರಾಸಕ್ತಿ ಫಲವಾಗಿ ಹಿನ್ನಡೆ ಉಂಟಾಗಿದೆ. ಈ ಕಾರಣಕ್ಕೆ ಈ ಘಟಕ ಮುಚ್ಚುವ ಸಾಧ್ಯತೆ ಬಗ್ಗೆ ಕಾರ್ಮಿಕರ ಸಂಘಟನೆಯು ತೀವ್ರ ಕಳವಳ ವ್ಯಕ್ತಪಡಿಸಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ವಿಐಎಸ್‌ಪಿಯ ತಯಾರಿಕಾ ಸಾಮರ್ಥ್ಯ, ಸ್ಥಳೀಯವಾಗಿ ಕಬ್ಬಿಣ ಅದಿರಿನ ಲಭ್ಯತೆ ಮತ್ತು ಕಾರ್ಮಿಕರ ಹಿತಾಸಕ್ತಿ ದೃಷ್ಟಿಯಿಂದ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು. ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1918ರಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಆರಂಭಿಸಿದ್ದ ಈ ಉಕ್ಕು ಸ್ಥಾವರನ್ನು ಮುಚ್ಚುವ ನಿರ್ಧಾರ ಕೈಬಿಡುವಂತೆ ಉಕ್ಕು ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು. ಸ್ಥಾವರದ ಪುನಶ್ಚೇತನಕ್ಕೆ ಅಗತ್ಯವಾಗಿರುವ ಬಂಡವಾಳ ಹೂಡಿಕೆ ಮಾಡಬೇಕು’ ಎಂದೂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT