ತುಮಕೂರು: ‘ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ನಾವು ಚಿಕಿತ್ಸೆ ಕೊಡುತ್ತೇವೆ ಎಂಬುದಕ್ಕಿಂತ ಅವರ ಇಚ್ಛೆ ಎಲ್ಲಿಯತನಕ ಇದೆಯೊ ಅಲ್ಲಿಯವರೆಗೂ ನಡೆಯುತ್ತದೆ. 111 ವರ್ಷದವರಿಗೆ ಈ ರೀತಿಯ ಚಿಕಿತ್ಸೆ ಕೊಡುತ್ತಿರುವುದೇ ಪ್ರಪಂಚದ ವಿಸ್ಮಯ’ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಹೇಳಿದರು.
ಗುರುವಾರ ಸ್ವಾಮೀಜಿ ಆರೋಗ್ಯ ತಪಾಸಣೆ ಬಳಿಕ ಮಾತನಾಡಿದರು.
‘ಸ್ವಾಮೀಜಿ ಅವರ ಶ್ವಾಸಕೋಶದಿಂದ ಬುಧವಾರ 600 ಎಂ.ಎಲ್ ನೀರು ತೆಗೆಯಲಾಗಿದೆ. ಸ್ವತಃ ಉಸಿರಾಡುವ ಶಕ್ತಿ ಬರಬೇಕಿದೆ. ಪ್ರೊಟೀನ್ ಅಂಶ ಸುಧಾರಣೆಯಾಗಿದ್ದರೂ ನಾವು ನಿರೀಕ್ಷಿಸಿದಷ್ಟು ಆಗಿಲ್ಲ. 111 ವರ್ಷದ ವ್ಯಕ್ತಿಗೆ ಪ್ರಪಂಚದಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ಉದಾಹರಣೆಗಳಿಲ್ಲ. ಹಾಗೆಯೇ ನಮ್ಮ ಸ್ವಾಮೀಜಿಯವರ ರೀತಿ 6 ಬಾರಿ ಎಂಡೋಸ್ಕೋಪಿ ಮಾಡಿಸಿಕೊಂಡವರು, ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮನೆಗೆ ಬಂದವರೂ ಇಲ್ಲ. ವೈದ್ಯಕೀಯ ವಿಜ್ಞಾನವೂ ಇಂತಹದ್ದನ್ನು ಕಂಡಿಲ್ಲ’ ಎಂದು ಹೇಳಿದರು.
‘ನನಗೆ ತಿಳಿದಿರುವ ಮಟ್ಟಿಗೆ ಪ್ರಪಂಚದಲ್ಲಿ ಹೀಗೆ ಓಡಾಡುತ್ತಿರುವ 6ನೇ ವ್ಯಕ್ತಿ ಇವರೇ. ವಿ ಟ್ರೀಟ್, ಹಿ ಕ್ಯೂರ್ಸ್’ ಎಂದರು.
**
ಸ್ವಾಮೀಜಿ ಇಚ್ಛಾಮರಣಿ; ವೀರಪ್ಪ ಮೊಯಿಲಿ
‘ಸ್ವಾಮೀಜಿ ಇಚ್ಛಾ ಮರಣಿಗಳು. ಅವರ ಮರಣವನ್ನು ಅವರೇ ನಿರ್ಣಯಿಸಿಕೊಳ್ಳುವಂತಹ ಇಚ್ಛಾ ಶಕ್ತಿಯನ್ನು ತಮ್ಮ ತಪಸ್ಸು, ಸಾಧನೆ, ಜನ ಸೇವೆಯ ಮೂಲಕ ಗಳಿಸಿಕೊಂಡಿದ್ದಾರೆ. ಅವರು ಇನ್ನೂ ಬಹುಕಾಲ ಬದುಕಬೇಕು. ಅವರ ಆರೋಗ್ಯ ಸುಧಾರಿಸಲಿ’ ಎಂದು ಸಂಸದ ವೀರಪ್ಪ ಮೊಯಿಲಿ ಹೇಳಿದರು.