ತುಮಕೂರು: ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿರುವ ನಗರದ ಸರಸ್ವತಿಪುರಂ ನಿವಾಸಿ, ಮದ್ಯದ ವ್ಯಾಪಾರಿ ರಮೇಶ್ ಗೌಡ ಅವರ ಮನೆಯಲ್ಲಿ ನೋವು ತೀವ್ರವಾಗಿ ಮಡುಗಟ್ಟಿದೆ.
ಅವರಿಗೆ ಪತ್ನಿ ಮಂಜುಳಾ, ಪುತ್ರ ಶೋಭಿತ್ ಹಾಗೂ ಪುತ್ರಿ ದಿಶಾ ಇದ್ದಾರೆ. ಕುಣಿಗಲ್ನ ರಮೇಶ್ ಗೌಡ ನಗರದಲ್ಲಿ ವಾಸಿಸುತ್ತಿದ್ದರು. ನೆಲಮಂಗಲದ ಸ್ನೇಹಿತರ ಜೊತೆ ಅವರು ಶ್ರೀಲಂಕಾಕ್ಕೆ ತೆರಳಿದ್ದರು. ಮಾಧ್ಯಮಗಳ ಮೂಲಕವೇ ಈ ಸಾವಿನ ಸುದ್ದಿ ಮನೆಯವರಿಗೆ ತಿಳಿಯಿತು.
ಸುದ್ದಿ ತಿಳಿದ ನಂತರ ಮನೆಯಿಂದ ಹೊರಗೆ ಅವರ ಕುಟುಂಬ ಸದಸ್ಯರು ಬರಲಿಲ್ಲ. ಮನೆಯೊಳಗಿನಿಂದ ಅಳುವ ಸದ್ದು ತೀವ್ರವಾಗಿ ಕೇಳುತ್ತಿತ್ತು. ರಮೇಶ್ ಗೌಡ ಅವರ ಸಹೋದರ ಪ್ರಕಾಶ್ ಅವರಿಂದ ಡಿವೈಎಸ್ಪಿ ತಿಪ್ಪೇಸ್ವಾಮಿ ಮಾಹಿತಿ ಪಡೆದರು. ಶವ ತರುವ ಸಲುವಾಗಿ ದಾಖಲೆಗಳೊಂದಿಗೆ ಪ್ರಕಾಶ್, ಶ್ರೀಲಂಕಾಕ್ಕೆ ತೆರಳಿದರು.