ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಮೋದಿ ಕಣ್ಣಿನ ಆಸ್ಪತ್ರೆಗೆ ಕಿಶೋರ್ ಮಾನೆ ಆಡಳಿತಾಧಿಕಾರಿಯಲ್ಲ. ಅವರು ಆಡಳಿತಾಧಿಕಾರಿ ಎಂದು ಹೇಳಿಕೊಳ್ಳುತ್ತಿರುವುದೇ ಹಾಸ್ಯಾಸ್ಪದ ಎಂದು ಡಾ. ಎಂ.ಸಿ. ಮೋದಿ ಅವರ ಸೋದರನ ಪುತ್ರ ಸುಭಾಷ್ ಮೋದಿ ಸ್ಪಷ್ಟಪಡಿಸಿದ್ದಾರೆ.
ತಮ್ಮ ದೊಡ್ಡಪ್ಪ ಮೋದಿ ಅವರು ಮಾಡಿರುವ ಡೀಡ್ ಪ್ರಕಾರವೇ ದಾವಣಗೆರೆ ಜಿಲ್ಲಾಧಿಕಾರಿ ತಮ್ಮನ್ನು ಆಸ್ಪತ್ರೆಯ ಟ್ರಸ್ಟಿಯಾಗಿ ನೇಮಿಸಿದ್ದಾರೆ. ಇದನ್ನು ನ್ಯಾಯಾಲಯವೂ ಮಾನ್ಯ ಮಾಡಿದೆ. ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಹೇಳಿದೆ ಎಂಬುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
‘ನಾನು ಆಸ್ಪತ್ರೆಗೆ ನುಗ್ಗಿ ದಾಂದಲೆ ಮಾಡಿದೆ ಎಂಬ ಆರೋಪ ಕಟ್ಟುಕಥೆ. ನನ್ನನ್ನು ಆಸ್ಪತ್ರೆಗೆ ಬರದಂತೆ ತಡೆಯಲು ಮಾನೆ ಅವರು ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಸುಭಾಷ್ ಆರೋಪಿಸಿದ್ದಾರೆ.
ಆಸ್ಪತ್ರೆಗೆ ತಾವು ಕಾನೂನುಬದ್ಧವಾಗಿ ನೇಮಕವಾಗಿರುವ ಟ್ರಸ್ಟಿ. ಆಸ್ಪತ್ರೆಯಲ್ಲಿ ಜವಾಬ್ದಾರಿ ನಿರ್ವಹಿಸಲು ರಕ್ಷಣೆ ನೀಡುವಂತೆ ನಗರ ಪೊಲೀಸರಿಗೂ ಮನವಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.