ಬೆಂಗಳೂರು: ಗಾಜಾ ಚಂಡ ಮಾರುತದಿಂದ ತಮಿಳುನಾಡಿನಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚೆನ್ನೈ ಸೇರಿದಂತೆ ಹಲವೆಡೆ ಮಂಗಳವಾರ ರಾತ್ರಿಯಿಂದ ಮಳೆ ಸುರಿಯುತ್ತಿದೆ.
ಮುಂದಿನ ಎರಡು ದಿನ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಇದೆ.ಇದರ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
‘ಬೆಂಗಳೂರು ಹಾಗೂ ಸುತ್ತ ಮುತ್ತಲಿನ ಭಾಗಗಳಲ್ಲಿ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಲಿದೆ. ಕರಾವಳಿಯಲ್ಲಿ ಕೆಲವು ಕಡೆ ಒಣಹವೆ ಮುಂದುವರಿಯಲಿದೆ’ ಎಂದು ಇಲಾಖೆಯ ಚನ್ನಬಸವನಗೌಡ ಎಸ್.ಪಾಟೀಲ್ ಹೇಳಿದರು.
‘ಶೀತ ಮಿಶ್ರಿತ ಗಾಳಿ ಮುಂದುವರಿಯಲಿದೆ. ಕೆಲವು ಕಡೆ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಮೂರು ದಿನ ವಾತಾವರಣದಲ್ಲಿ ಬದಲಾವಣೆ ಇರುತ್ತದೆ’ ಎಂದರು. ತಮಿಳುನಾಡಿನ ಕೆಲವೆಡೆ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.