ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ‘ನತ್ತ ವಲಸೆಗೆ ತಡೆ: ವಿಜಯೇಂದ್ರ ಕಾರ್ಯತಂತ್ರ

Published 12 ನವೆಂಬರ್ 2023, 16:47 IST
Last Updated 12 ನವೆಂಬರ್ 2023, 16:47 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ಬಿಟ್ಟು ಕಾಂಗ್ರೆಸ್‌ ಕಡೆಗೆ ವಲಸೆ ಹೊರಟ್ಟಿರುವವರನ್ನು ತಡೆಯುವ ಪ್ರಯತ್ನಕ್ಕೆ ಪಕ್ಷದ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೈ ಹಾಕಿದ್ದಾರೆ. ಸುಮಾರು 25 ರಿಂದ 30 ಮಂದಿ ಮಾಜಿ ಮತ್ತು ಹಾಲಿ ಶಾಸಕರು ಹಾಗೂ ಇತರ ನಾಯಕರನ್ನು ಸಂಪರ್ಕಿಸಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾರ್ಯತಂತ್ರ ಆರಂಭಿಸಿದ್ದಾರೆ.

ಕಾಂಗ್ರೆಸ್‌ನಿಂದ ಜಗದೀಶ ಶೆಟ್ಟರ್‌ ಮೂಲಕ ನಾಯಕರನ್ನು ಸೆಳೆದು ಬಿಜೆಪಿ ಬಲವನ್ನು ಕುಗ್ಗಿಸುವ ಪ್ರಯತ್ನ ಭರ್ಜರಿಯಾಗಿಯೇ ನಡೆದಿತ್ತು. ಈ ಮೂಲಕ ಲೋಕಸಭೆ ಚುನಾವಣೆಗೂ ಮೊದಲೇ ಬಿಜೆಪಿಗೆ ಪ್ರಬಲ ಹೊಡೆತ ನೀಡಲು ಕಾಂಗ್ರೆಸ್‌ ತಯಾರಿ ನಡೆಸಿತ್ತು.

ಎಂ.ಪಿ. ರೇಣುಕಾಚಾರ್ಯ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಬಿಜೆಪಿ ಮೂಲದ ನಾಯಕರಿಗೆ ಕಾಂಗ್ರೆಸ್‌ ಗಾಳ ಹಾಕಿತ್ತು. ಅಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರ ಹೆಸರು ಘೋಷಣೆ ಆಗುತ್ತಿದ್ದಂತೆ, ರೇಣುಕಾಚಾರ್ಯ ಅವರು ಯಡಿಯೂರಪ್ಪ ಮನೆಯ ಪಡಸಾಲೆಯಲ್ಲಿ ಕಾಣಿಸಿಕೊಂಡರು. ಇದಕ್ಕೂ ಮೊದಲು ಇವರು ಕಾಂಗ್ರೆಸ್‌ನತ್ತ ಒಂದು ಹೆಜ್ಜೆ ಇಟ್ಟಿದ್ದೂ ಅಲ್ಲದೇ, ಪಕ್ಷದ ಹಲವು ನಾಯಕರ ಬಗ್ಗೆ ಆಗಿಂದ್ದಾಗ್ಗೆ ಅಸಮಾಧಾನ ತೋಡಿಕೊಂಡಿದ್ದರು.

ಪಕ್ಷದಲ್ಲಿ ಅಸಮಾಧಾನಗೊಂಡು ಕಾಂಗ್ರೆಸ್‌ನತ್ತ ಮುಖ ಮಾಡಿರುವವರನ್ನು ವಿಜಯೇಂದ್ರ ಅವರು ಶನಿವಾರವೇ ಸಂಪರ್ಕಿಸಿ, ‘ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರ ತೆಗೆದುಕೊಳ್ಳಬಾರದು. ಯಾವುದೇ ಅನ್ಯಾಯ ಆಗಿದ್ದರೆ ಸರಿಪಡಿಸುತ್ತೇವೆ’ ಎಂಬ ಭರವಸೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿಜಯೇಂದ್ರ ಅವರು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ್ದಾರೆ. ಕಾಂಗ್ರೆಸ್‌ ಸೇರಲು ತುದಿಗಾಲಿನಲ್ಲಿ ನಿಂತಿರುವ ಶಾಸಕ ಎಸ್‌.ಟಿ. ಸೋಮಶೇಖರ್ ಅವರನ್ನು ಇನ್ನೂ ಸಂಪರ್ಕಿಸಿಲ್ಲ. ಪಕ್ಷ ಬಿಡುವ ಬಗ್ಗೆ ಚಿಂತನೆ ನಡೆಸಿರುವ ನಾಯಕರನ್ನು ಸಂಪರ್ಕಿಸಿ ಮಾತನಾಡುವ ಕೆಲಸವನ್ನು ವಿಜಯೇಂದ್ರ ಅವರು ರೇಣುಕಾಚಾರ್ಯ ಅವರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಪ್ರಯತ್ನದ ಫಲವಾಗಿ ಗೊಂದಲದಲ್ಲಿದ್ದ ಹಲವು ನಾಯಕರು ಪಕ್ಷ ತೋರೆಯುವ ವಿಚಾರವನ್ನು ಸದ್ಯಕ್ಕೆ ಬದಿಗಿರಿಸಿದ್ದಾರೆ. ಈ ಪ್ರಯತ್ನ ಮುಂದುವರೆಯಲಿದೆ ಎಂದು ವಿಜಯೇಂದ್ರ ಅವರ ಆಪ್ತ ಮೂಲಗಳು ತಿಳಿಸಿವೆ.

ಅತೃಪ್ತ ಹಿರಿಯರ ಭೇಟಿ:

ತಮ್ಮ ಮತ್ತು ತಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ಅತೃಪ್ತಿ ಹೊಂದಿರುವ ನಾಯಕರನ್ನು ಭೇಟಿ ಮಾಡಿ ಒಗ್ಗಟ್ಟಿನಿಂದ ಪಕ್ಷವನ್ನು ಮುನ್ನಡೆಸಲು ಸಹಕಾರ ಕೋರಲು ತೀರ್ಮಾನಿಸಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ, ಸಿ.ಟಿ. ರವಿ, ಕೆ.ಎಸ್‌. ಈಶ್ವರಪ್ಪ, ವಿ. ಸೋಮಣ್ಣ ಸೇರಿದಂತೆ ಹಲವು ಹಿರಿಯರನ್ನು ಭೇಟಿ ಮಾಡಿ ಚರ್ಚಿಸಲು ವಿಜಯೇಂದ್ರ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಎಲ್ಲ ಹಿರಿಯರನ್ನು ಭೇಟಿ ಮಾಡಲಿದ್ದು, ತಮ್ಮ ಮೇಲೆ ಪಕ್ಷದ ವರಿಷ್ಠರು ಹೊರಿಸಿರವ ಹೊಣೆಗಾರಿಕೆ ಈಡೇರಿಸಿ ಕೇಂದ್ರದಲ್ಲಿ ಮತ್ತೆ ಮೋದಿ ನೇತೃತ್ವದಲ್ಲಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದು ಅಗತ್ಯ. ಎಲ್ಲರೂ ಕೈಜೋಡಿಸಿ ಈ ಕೆಲಸ ಮಾಡಬೇಕು ಎಂಬುದಾಗಿ ಮನವಿ ಮಾಡಲಿದ್ದಾರೆ. ಈ ಮೂಲಕ ತಮಗೆ ಪಕ್ಷದ ಕೆಲಸ ಮಾಡಲು ಮಾರ್ಗದರ್ಶನ ನೀಡಬೇಕು ಎಂದು ಅವರು ಕೋರಲಿದ್ದಾರೆ. ಈ ನಡೆಯ ಮೂಲಕ ಆರಂಭದಲ್ಲೇ ಅತೃಪ್ತಿಯನ್ನು ಶಮನಗೊಳಿಸುವ ಕಾರ್ಯಕ್ಕೆ ಕೈಹಾಕಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT