ಬೆಂಗಳೂರು: ಜಲಾಶಯಕ್ಕೆ ಒಳಹರಿವು ಬಂದಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆಯ ಅಚ್ಚುಕಟ್ಟು ಪ್ರದೇಶಗಳಿಗೆ ಹೆಚ್ಚು ನೀರು ಹರಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕೃಷ್ಣಾ ಮೇಲ್ದಂಡೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ತಿಳಿಸಿದ್ದಾರೆ.
ಚಾಲು–ಬಂದ್ ಪದ್ಧತಿಯನ್ನು ಪರಿಷ್ಕರಿಸಿ 14 ದಿನ ನೀರು ಚಾಲು ಮತ್ತು 10 ದಿನಗಳ ಬದಲಿಗೆ ಎಂಟು ದಿನಗಳು ಮಾತ್ರ ಬಂದ್ ಪದ್ಧತಿಯನ್ನು ಅನುಸರಿಸಿ ಅ.17 ರ ಬದಲಿಗೆ 14 ರಿಂದಲೇ ನೀರು ಚಾಲು ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ, ಮುಂಗಾರು ಹಂಗಾಮಿಗೆ ನವೆಂಬರ್ 23 ರವರೆಗೆ ನೀರು ಹರಿಸಲು ಕೈಗೊಂಡಿದ್ದ ನಿರ್ಣಯದ ಬದಲಾಗಿ ಡಿಸೆಂಬರ್ 10 ರವರೆಗೂ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಮ್ಮಾಪೂರ ತಿಳಿಸಿದ್ದಾರೆ.
ಈ ಕ್ರಮದಿಂದಾಗಿ ಬಾಗಲಕೋಟೆ, ವಿಜಯಪುರ, ಕಲಬುರಗಿ,ಯಾದಗಿರಿ, ರಾಯಚೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.