ಚಾಮರಾಜನಗರ: ತಾಲ್ಲೂಕಿನ ಹೊಂಡರುಬಾಳುವಿನಲ್ಲಿರುವ ಅಮೃತಭೂಮಿ ಅಂತರರಾಷ್ಟ್ರೀಯ ಸುಸ್ಥಿರ ಕೇಂದ್ರದಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ಯುವರೈತರ ಕಾರ್ಯಾಗಾರದಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಯುವ ಘಟಕದ ಸಂಚಾಲಕರಾದ ಮಹೇಶ್ ದೇಶಪಾಂಡೆ ಮತ್ತು ಮಹೇಶ್ ಗೌಡ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ನಿರ್ಣಯಗಳು: ರೈತ ಯುವ ವಿಭಾಗವನ್ನು ರಾಜ್ಯದಾದ್ಯಂತ ಪ್ರಬಲ ಮತ್ತು ಪರಿಣಾಮಕಾರಿಯಾಗಿ ಕಟ್ಟುವುದು.
ಆರು ತಿಂಗಳ ಕಾಲ ವ್ಯವಸ್ಥಿತ ತಯಾರಿ ನಡೆಸಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ತಂಡಗಳನ್ನು ಹಾಗೂ ಎಲ್ಲ ಜಿಲ್ಲೆಗಳಲ್ಲಿ ಹಂಗಾಮಿ ಸಮಿತಿಗಳನ್ನು ರಚಿಸುವುದು.
2019ರ ಫೆಬ್ರುವರಿ 13ರಂದು ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಹುಟ್ಟುಹಬ್ಬದಂದು ರಾಜ್ಯ ರೈತ ಸಂಘದ ಅಡಿಯಲ್ಲಿ ಅದರ ಅಂಗ ಸಂಘಟನೆಯಾಗಿ ಉದ್ಘಾಟಿಸುವುದು.
ಮೊದಲ ಹಂತದಲ್ಲಿ ಎಲ್ಲ ವಿಭಾಗಮಟ್ಟದಲ್ಲಿ ರಾಜ್ಯ ಶಿಬಿರದ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವುದು.
ರಾಜ್ಯದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಸೃಷ್ಟಿಯ ಸಾಧ್ಯತೆಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳ ಸಾಧ್ಯತೆಗಳನ್ನು ಗುರುತಿಸಿ ಅದನ್ನು ಜಾರಿ ಮಾಡಲು ಬೇಕಾದ ತಯಾರಿಯನ್ನು ನಡೆಸುವುದು.
ಗ್ರಾಮೀಣ ಭಾಗದ ಯುವತಿಯರು ಹಾಗೂ ಯುವಕರನ್ನು ಸಂಘಟಿಸುವುದಲ್ಲದೆ ರಾಜ್ಯದ ನಗರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಆಸಕ್ತರು ಪರಿಣತರು ಮತ್ತು ಸಂಘಟನೆಗಳನ್ನು ನಮ್ಮ ಬಳಗಕ್ಕೆ ಸೇರಿಸಲು ಪ್ರಯತ್ನಿಸುವುದು.
ರೈತಸಂಘ ಯುವ ಘಟಕದ ಮಂಜುನಾಥ್ ಅಮಲಗುಂದಿ, ನಳಿನಿ, ನಿತೀಶ್, ಗಾಯತ್ರಿ ಶಂಭುಲಿಂಗೇಗೌಡ, ಲೊಕ್ಕಹಳ್ಳಿ ನಂಜುಂಡಸ್ವಾಮಿ ಇದ್ದರು.
ಹಂಗಾಮಿ ರಾಜ್ಯಸಮಿತಿಗೆ ಸಂಚಾಲಕರ ನೇಮಕ
ಜಿಲ್ಲೆಗಳಲ್ಲಿ ರಚಿಸಲು ಉದ್ದೇಶಿಸಿರುವ ಹಂಗಾಮಿ ಸಮಿತಿಗಳಿಗೆ ವಲಯಮಟ್ಟದ ಸಂಚಾಲಕರನ್ನು ಕಾರ್ಯಾಗಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಮಹೇಶ್ ದೇಶಪಾಂಡೆ ಹೇಳಿದರು.
ಸಂಚಾಲಕರ ವಿವರ ಇಂತಿದೆ:
ಬೆಳಗಾವಿ: ಮಹೇಶ್ ದೇಶಪಾಂಡೆ ಮತ್ತು ಯಶವಂತ್
ಕಲಬುರ್ಗಿ: ದೇವೇಂದ್ರಗೌಡ ಪೊಲೀಸ್ ಪಾಟೀಲ
ದಾವಣಗೆರೆ: ಮಹಬೂಬ್ ಮತ್ತು ಜ್ಯೋತಿ ಬಳ್ಳಾರಿ
ಬೆಂಗಳೂರು: ಯತೀಶ್, ನಳಿನಿ ಮತ್ತು ನಿತೀಶ್
ಮೈಸೂರು: ಹರೀಶ್, ನವೀನ್, ಗಾಯತ್ರಿ, ಶಂಭುಲಿಂಗೇಗೌಡ ಮತ್ತು ಆರ್.ವಸಂತ ಕುಮಾರಿ
ಬೆಂಗಳೂರು ನಗರ ಮತ್ತು ಸಾಮಾಜಿಕ ಜಾಲತಾಣ ನಿರ್ವಹಣೆ: ನವಾಜ್, ಅಚ್ಯುತ್ ಮತ್ತು ಕಮ್ರನ್
ಸಂಯೋಜಕರು: ಮಹೇಶ್ ದೇಶಪಾಂಡೆ ಮತ್ತು ಯತೀಶ್ ಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.