ಬೆಂಗಳೂರು: ರಾಮನಗರ, ಶಿವಮೊಗ್ಗ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿನ ಗ್ರಾಮ ಲೆಕ್ಕಿಗರ ಹುದ್ದೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಿ ನೇಮಕಾತಿ ಅಧಿಸೂಚನೆಯನ್ನು ಮರು ಪ್ರಕಟಿಸುವಂತೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಮನಗರದಲ್ಲಿ 30 ಹಾಗೂ ಉಳಿದೆರಡು ಜಿಲ್ಲೆಗಳಲ್ಲಿ ತಲಾ 43 ಹುದ್ದೆಗಳಿಗೆ ಸಂಬಂಧಿಸಿದಂತೆ ಈಗ ನಡೆದಿರುವ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಆಯುಕ್ತರು ನಿರ್ದೇಶಿಸಿದ್ದಾರೆ.
ಒಂದು ವೇಳೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದಲ್ಲಿ, ಅಂಗವಿಕಲರಿಗೆ ಮೀಸಲು ಇರಿಸಬೇಕಿರುವ ಹುದ್ದೆಗಳ ಸಂಖ್ಯೆಯನ್ನು ಲೆಕ್ಕ ಮಾಡಿ ಹಿಂಬಾಕಿ ಹುದ್ದೆಗಳನ್ನಾಗಿ ಪರಿಗಣಿಸಿ ನೇಮಕಾತಿ ಮಾಡಬೇಕು ಎಂದು ಕಂದಾಯ ಇಲಾಖೆಗೆ ಅವರು ಸೂಚಿಸಿದ್ದಾರೆ.
ಅಂಗವಿಕಲರಿಗೂ ಕಾಯ್ದೆ ಅನ್ವಯ ಸಮಾನ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ಆದೇಶಿಸಿದ್ದರೂ, ಅದನ್ನು ಪಾಲನೆ ಮಾಡದ ಕ್ರಮಕ್ಕೆ ಆಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹುದ್ದೆ ಮೀಸಲು ಇರಿಸದ ಬಗ್ಗೆ ಬಂದಿರುವ ಹಲವು ದೂರುಗಳ ಆಧಾರದ ಮೇಲೆ, ಅವರು ಸರ್ಕಾರದ ಕಾರ್ಯದರ್ಶಿ ಹಾಗೂ ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು. ಆದರೆ ಅದಕ್ಕೆ ಸೂಕ್ತ ಉತ್ತರ ಬಾರದೇ ಇರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.