ಬೆಂಗಳೂರು: ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ದೇಶದಾದ್ಯಂತ ಏಕರೂಪದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ನಡೆಸುವ ಸಂಬಂಧ ಉಂಟಾಗಿದ್ದ ಗೊಂದಲಕ್ಕೆ ಕೇಂದ್ರ ಸರ್ಕಾರ ತೆರೆ ಎಳೆದಿದ್ದು ಈ ವರ್ಷವೂ ರಾಜ್ಯ ಸರ್ಕಾರದ ಸಿಇಟಿ ನಡೆಯಲಿದೆ.
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಮನವಿ ಮೇರೆಗೆ ಎನ್ಇಇಟಿ ಪರೀಕ್ಷೆಯನ್ನು ಒಂದು ವರ್ಷದ ಮಟ್ಟಿಗೆ ಮುಂದೂಡಲಾಗಿದೆ. ಈ ವರ್ಷ (2012-13) ಆಯಾ ರಾಜ್ಯ ಸರ್ಕಾರಗಳು ಹಾಲಿ ಇರುವ ಪದ್ಧತಿ ಪ್ರಕಾರವೇ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರವೇಶ ಪರೀಕ್ಷೆ ಸಂಬಂಧ ಈಚೆಗೆ ಸುತ್ತೋಲೆ ಹೊರಡಿಸಿದ್ದು, ಎನ್ಇಇಟಿಯನ್ನು 2013-14ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರುವಂತೆ ಅಳವಡಿಸಿ ಕೊಳ್ಳ ಲಾಗುತ್ತದೆ ಎಂದು ತಿಳಿಸಿರು ವುದಾಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿ ಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ರಾಜ್ಯದಲ್ಲಿ ಈ ವರ್ಷ ಎನ್ಇಇಟಿಯನ್ನು ಅಳವಡಿಸಿಕೊಳ್ಳಲಾ ಗುತ್ತದೊ ಅಥವಾ ಸಿಇಟಿ ಮುಂದುವರಿಯುತ್ತದೊ ಎಂದು ವಿದ್ಯಾರ್ಥಿಗಳನ್ನು ಕಾಡುತ್ತಿದ್ದ ಗೊಂದಲಗಳಿಗೆ ಕೇಂದ್ರದ ಈ ಕ್ರಮದಿಂದಾಗಿ ತೆರೆ ಬಿದ್ದಿದೆ.
ಎನ್ಇಇಟಿ ಮುಂದೂಡಿರುವ ಹಿನ್ನೆಲೆಯಲ್ಲಿ ಹಳೆಯ ಪದ್ಧತಿ ಪ್ರಕಾ ರವೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೈದ್ಯಕೀಯ/ದಂತ ವೈದ್ಯ ಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಶೀಘ್ರದಲ್ಲೇ ಪರೀಕ್ಷೆಯ ದಿನಾಂಕ ನಿಗದಿಯಾಗಲಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಈ ವರ್ಷವೇ ಎನ್ಇಇಟಿ ನಡೆಯ ಬೇಕಾಗಿತ್ತು. ಆದರೆ ರಾಷ್ಟ್ರಮಟ್ಟದಲ್ಲಿ ಏಕರೂಪ ಪ್ರವೇಶ ಪರೀಕ್ಷೆಗೆ ನಿಗದಿಪಡಿಸಿರುವ ಪಠ್ಯಕ್ರಮ ಕಠಿಣವಾಗಿದ್ದು, ಅದಕ್ಕೆ ಅನುಗುಣವಾಗಿ ಪಿಯುಸಿಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿಲ್ಲ. ಆದ್ದರಿಂದ ಎರಡು ವರ್ಷ ಮುಂದೂಡಿ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿತ್ತು. ಅಲ್ಲದೆ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಕೆಲ ರಾಜ್ಯಗಳು ಇದೇ ರೀತಿ ಕೇಂದ್ರದ ಮೇಲೆ ಒತ್ತಡ ಹೇರಿದ್ದವು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿ ಎನ್ಇಇಟಿ ಅಳವಡಿಸಿಕೊಳ್ಳಲು ಒಂದು ವರ್ಷದ ಮಟ್ಟಿಗೆ ವಿನಾಯಿತಿ ನೀಡುವಂತೆ ಕೋರಿತ್ತು. `ನ್ಯಾಯಾಲಯ ಇದಕ್ಕೆ ಪೂರ್ಣ ಸಮ್ಮತಿ ವ್ಯಕ್ತಪಡಿಸದಿದ್ದರೂ, ಮೊದಲು ಅಧಿಸೂಚನೆ ಹೊರಡಿಸಿ, ನಂತರ ನಿಮ್ಮ ಇಷ್ಟದಂತೆ ಮಾಡಿಕೊಳ್ಳಿ~ ಎಂದು ಹೇಳಿತ್ತು.
ಆ ಪ್ರಕಾರ ಕೇಂದ್ರ ಸರ್ಕಾರ ಒಂದು ವರ್ಷ ಮುಂದೂಡುವ ನಿರ್ಧಾರವನ್ನು ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ ಶೀಘ್ರವೇ ನಡೆಯಲಿದೆ. ಆ ಸಭೆಯಲ್ಲಿ ಸಿಇಟಿ ದಿನಾಂಕ, ಕೌನ್ಸೆಲಿಂಗ್ನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡುವ ಸಂಬಂಧ ನಿಯಮಗಳಿಗೆ ತಿದ್ದುಪಡಿ ತರುವುದು, ಸಿಇಟಿ ಬರೆಯುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ಈಗಿನ ಲೆಕ್ಕಾಚಾರದ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ ಸಿಇಟಿ ಪರೀಕ್ಷೆ ನಡೆಯುವ ಸಾಧ್ಯತೆ ಇದ್ದು, ಈ ತಿಂಗಳಲ್ಲಿ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದೆ. ಪರೀಕ್ಷೆಗೆ ಸಂಬಂಧಿಸಿದ ಕೈಪಿಡಿ ಪ್ರಕಟಣೆಗೆ ಸಿದ್ಧತೆ ನಡೆದಿದೆ.
ಪ್ರತಿ ವರ್ಷ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಮೊದಲೇ ಪ್ರಕಟಿಸಿ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರಕಟಿಸುವ ಸೀಟು ಹಂಚಿಕೆ ಪಟ್ಟಿಗಾಗಿ ಕೊನೆ ಗಳಿಗೆವರೆಗೂ ಕಾಯಬೇಕಾಗಿತ್ತು.
ಒಂದು ವೇಳೆ ಪಟ್ಟಿ ಪ್ರಕಟವಾಗುವುದು ತಡವಾದರೆ ಕೌನ್ಸೆಲಿಂಗ್ ಮುಂದೂಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಇದಕ್ಕೆ ಅವಕಾಶ ನೀಡದೆ ಎಐಸಿಟಿಇ ಸೀಟು ಹಂಚಿಕೆ ಪಟ್ಟಿ ಬಿಡುಗಡೆ ಮಾಡುವ ವೇಳಾಪಟ್ಟಿಗೆ ಅನುಗುಣವಾಗಿ ಕೌನ್ಸೆಲಿಂಗ್ನ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕಾಮೆಡ್-ಕೆ ನಡುವೆ ಇನ್ನಷ್ಟೇ ಮಾತುಕತೆ ನಡೆಯಬೇಕಾಗಿದ್ದು, ಈ ತಿಂಗಳ ಕೊನೆಯ ವೇಳೆಗೆ ಈ ಪ್ರಕ್ರಿಯೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಾಮೆಡ್-ಕೆ: ಆಡಳಿತ ಮಂಡಳಿ ಕೋಟಾ ಸೀಟುಗಳ ಭರ್ತಿಗೆ ಕಾಮೆಡ್-ಕೆ ಈ ಬಾರಿಯೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ನಿರ್ಧರಿಸಿದ್ದು, ಮೇ 6ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಮಾರ್ಚ್ ಹತ್ತರಿಂದ ಏಪ್ರಿಲ್ ಹತ್ತರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.