ಮೈಸೂರು: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಕ್ಕೆ ಅವರ ಅಭಿಮಾನಿ, ಅಂಗವಿಕಲ ಮಹಿಳೆ ಯೊಬ್ಬರು ಭಾನುವಾರ ಬರಿಗಾಲಿನಲ್ಲಿ ಇಲ್ಲಿನ ಚಾಮುಂಡಿಬೆಟ್ಟ ಹತ್ತಿ ಹರಕೆ ತೀರಿಸಿದ್ದಾರೆ.
ಕಲಬುರ್ಗಿಯ ಸಂಗೀತಾ ಹರಕೆ ತೀರಿಸಿದ ಮಹಿಳೆ. ಅವರ ಒಂದು ಕಾಲು ಊನವಾಗಿದೆ. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಚಾಮುಂಡಿಬೆಟ್ಟ ಹತ್ತುವುದಾಗಿ ನಾಡ ದೇವತೆ ಚಾಮುಂಡೇಶ್ವರಿಗೆ ಹರಕೆ ಹೊತ್ತಿದ್ದರು.
ಪತಿ ಹಾಗೂ ಕುಟುಂಬದವರ ಜೊತೆಗೂಡಿ ಬೆಟ್ಟದ 1,001 ಮೆಟ್ಟಿಲುಗಳನ್ನು ಹತ್ತಿ ಪೂಜೆ ಸಲ್ಲಿಸಿದರು.
2006ರಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರನ್ನು ಜನತಾದರ್ಶನದಲ್ಲಿ ಭೇಟಿಯಾಗಿದ್ದರು. ಆಗ ಅಂಗವಿಕಲರ ಕೋಟಾದಡಿ ಸಂಗೀತಾ ಅವರಿಗೆ ಬೆಂಗಳೂರಿನ ‘ನಮ್ಮ ಮೆಟ್ರೊ’ದಲ್ಲಿ ಉದ್ಯೋಗ ಕಲ್ಪಿಸಿಕೊಟ್ಟಿದ್ದರು.
‘ಕಣ್ಣಿಗೆ ಕಾಣುವ ದೇವರು ಕುಮಾರ ಸ್ವಾಮಿ. ಈ ಬಾರಿ ಮುಖ್ಯಮಂತ್ರಿ ಆಗು ತ್ತಾರೆ ಎಂಬ ಭರವಸೆ ಇತ್ತು. ಜೀವನ ಸಾಗಿಸಲು ಅವರು ನೀಡಿರುವ ನೆರವನ್ನು ಮರೆಯಲಾರೆ. ನಮ್ಮಂಥವರಿಗೆ ಸಹಾಯ ಮಾಡಲು ಅವರಿಗೆ ಶಕ್ತಿ, ಆಯುಷ್ಯ ಕೊಡು ಎಂಬುದಾಗಿ ದೇವ ರಲ್ಲಿ ಬೇಡಿಕೊಂಡೆ’ ಎಂದು ತಿಳಿಸಿದರು.