ಮಂಗಳೂರು: ಕೊಚ್ಚಿ - ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗ ಕಾಮಗಾರಿ 2018ರ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು.
ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ' ಆರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ಈಗ ವೇಗ ಪಡೆದುಕೊಂಡಿದೆ. ಕೇರಳ ಮತ್ತು ಕರ್ನಾಟಕ ಸರ್ಕಾರಗಳು ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡುತ್ತಿವೆ' ಎಂದರು.
2019ರ ಆರಂಭದ ಕೆಲವು ತಿಂಗಳೊಳಗೆ ಮಂಗಳೂರು ಮತ್ತು ಸುತ್ತಲಿನ ಕೆಲವು ನಗರಗಳಲ್ಲಿ ಮನೆಗಳಿಗೆ ಕೊಳವೆ ಮೂಲಕ ಎಲ್ ಪಿಜಿ ಅನಿಲ ಪೂರೈಸುವ ಯೋಜನೆ ಇದೆ. ಇದಕ್ಕಾಗಿ ಪ್ರತ್ಯೇಕ ಕಂಪೆನಿಯೊಂದನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಹೇಳಿದರು.
ಎಂ ಆರ್ ಪಿ ಎಲ್ ಕಂಪೆನಿಗೆ ಮುಂದಿನ ಐದು ವರ್ಷಗಳಲ್ಲಿ ₹ 70,000 ಕೋಟಿ ಹೂಡಿಕೆ ಹರಿದು ಬರಲಿದೆ. 2019ರ ಅಂತ್ಯದೊಳಗೆ ಬಿಎಸ್- 6 ಗುಣಮಟ್ಟದ ಡೀಸೆಲ್ ಮತ್ತು ಪೆಟ್ರೋಲ್ ಉತ್ಪಾದನೆಗೆ ಈ ಕಂಪೆನಿ ಸಜ್ಜಾಗಿದೆ ಎಂದರು.
ಎಂ ಆರ್ ಪಿ ಎಲ್ ವಿಸ್ತರಣೆಗೆ ಯಾವುದೇ ಅಡ್ಡಿಗಳಿಲ್ಲ. ಭೂಸ್ವಾಧೀನ, ಪರಿಹಾರ ಮತ್ತು ಪುನರ್ವಸತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸಲಹೆ ಆಧರಿಸಿ ಮುಂದುವರಿಯಲಾಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ವಿಷಯದಲ್ಲಿ ಕಂಪೆನಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.