ಬೆಂಗಳೂರು (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಂದ 1997ರಲ್ಲಿ ವಶಪಡಿಸಿಕೊಳ್ಳಲಾದ ಬೆಲೆಬಾಳುವ ವಸ್ತುಗಳನ್ನು ಹಾಜರುಪಡಿಸಲು ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ. ಜಯಲಲಿತಾ ಅವರು ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎಂಬ ದೂರಿನ ಕುರಿತು ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
ಜಯಲಲಿತಾ ಅವರಿಂದ ವಶಪಡಿಸಿಕೊಳ್ಳಲಾದ ಬೆಲೆಬಾಳುವ ವಸ್ತುಗಳನ್ನು ಚೆನ್ನೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಖಜಾನೆಯಲ್ಲಿ ಇಡಲಾಗಿದೆ. ಅದನ್ನು ಇದೇ 21ರೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕೇಲ್ ಡಿಕುನ್ನ ಅವರು ಆದೇಶಿಸಿದರು.
1997ರಲ್ಲಿ ವಶಪಡಿಸಿಕೊಳ್ಳಲಾದ 800 ಕೆ.ಜಿ ಬೆಳ್ಳಿ, 28 ಕೆ.ಜಿ ಚಿನ್ನ, 70 ಜೊತೆ ಪಾದರಕ್ಷೆಗಳು, 10,500 ಸೀರೆಗಳು, 91 ಕೈಗಡಿಯಾರಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕೋರ್ಟ್ ತನ್ನ ವಶಕ್ಕೆ ಪಡೆಯಬೇಕು ಎಂದು ಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಅರ್ಜಿಯಲ್ಲಿ ಕೋರಿದ್ದರು.