ಬಳ್ಳಾರಿ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಕಣದಲ್ಲಿರುವ ಮೂವರು ಪ್ರಮುಖ ಅಭ್ಯರ್ಥಿಗಳ ಪರ ಪ್ರಚಾರ ಶುಕ್ರವಾರ ಮತ್ತಷ್ಟು ತೀವ್ರಗೊಂಡಿದೆ.
ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಪ್ರಮುಖರೆಲ್ಲರೂ ಬಳ್ಳಾರಿಯಲ್ಲೇ ಬೀಡುಬಿಟ್ಟಿದ್ದು, ಗೃಹ ಸಚಿವ ಆರ್. ಅಶೋಕ್, ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ರಾಷ್ಟ್ರೀಯ ಮುಖಂಡ ವೆಂಕಯ್ಯ ನಾಯ್ಡು ಅವರು ಮತದಾರರ ಮನ ಸೆಳೆಯಲು ಯತ್ನಿಸಿದವರಲ್ಲಿ ಸೇರ್ಪಡೆಯಾದರು.
ಕಾಂಗ್ರೆಸ್ ಮುಖಂಡ ಮುಂಡ್ಲೂರು ರಾಮಪ್ಪ ಅವರ ಪುತ್ರ ಮುಂಡ್ಲೂರು ಅನೂಪ್ ಅವರು ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ಪಕ್ಷ ಸೇರಿದರು. ನಂತರ ತೆಲುಗು ಭಾಷಿಕರೇ ಅಧಿಕ ಸಂಖ್ಯೆಯಲ್ಲಿರುವ ಕೃಷ್ಣಾ ನಗರ ಕ್ಯಾಂಪ್ಗೆ ತೆರಳಿದ ನಾಯ್ಡು, ತೆಲುಗಿನಲ್ಲಿಯೇ ಮತಯಾಚನೆ ಮಾಡಿ ಅಭಿವೃದ್ಧಿಪರ ಬಿಜೆಪಿಯನ್ನು ಬೆಂಬಲಿಸುವಂತೆ ಕೋರಿದರು.
ಸಂಜೆ ಗಾಂಧಿಭವನದಲ್ಲಿ ಗ್ರಾಮೀಣ ಭಾಗದ ಮತಗಟ್ಟೆ ಏಜೆಂಟರು ಹಾಗೂ ಗ್ರಾಮ ಪಂಚಾಯಿತಿಗಳ ಸದಸ್ಯರ ಸಭೆ ನಡೆಸಿದ ಅವರು, ಬಿಜೆಪಿಯನ್ನೇ ಬೆಂಬಲಿಸುವಂತೆ ಮತದಾರರ ಮನವೊಲಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮನವಿ ಮಾಡಿದರು.
ತಾಲ್ಲೂಕಿನ ಕಕ್ಕಬೇವಿನಹಳ್ಳಿ, ಅಮರಾಪುರ ಮತ್ತಿತರ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಚಿತ್ರನಟ ಶಶಿಕುಮಾರ್, ಆಸ್ಕರ್ ಫರ್ನಾಂಡಿಸ್, ವಿ.ಎಸ್. ಉಗ್ರಪ್ಪ ಇತರರು ಬಹಿರಂಗ ಪ್ರಚಾರ ನಡೆಸಿ, ಮತದಾರರ ಕುರಿತ ರ್ಕಾರದ ನಿರ್ಲಕ್ಷ್ಯ, ಅಕ್ರಮ ಗಣಿಗಾರಿಕೆ ವಿಷಯಗಳನ್ನೇ ಪ್ರಧಾನವಾಗಿಸಿಕೊಂಡು ವಾಗ್ದಾಳಿ ನಡೆಸಿದರಲ್ಲದೆ, ಶ್ರೀರಾಮುಲು ವಿರುದ್ಧ ಆರೋಪಗಳ ಸುರಿಮಳೆಗರೆದರು.