ಪುರಪ್ರವೇಶ ಆಯೋಜನಾ ಸಮಿತಿಯ ವತಿಯಿಂದ ಸ್ವಾಮೀಜಿ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಿ ಶಂಕರಪುರದ ಕರ್ನಾಟಕ ಜೈನ ಮಂದಿರಕ್ಕೆ ಮೆರವಣಿಗೆಯಲ್ಲಿ ಕರೆ ತರಲಾಯಿತು. ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಿದ ಬಳಿಕ ಜಿನ ಮಂದಿರದಲ್ಲಿ ನವಕಲಶಾಭಿಷೇಕ ಪೂಜೆ, ಆರಾಧನೆ ನಡೆಯಿತು. ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ದೇವರಿಗೆ ಕುಂಕುಮಾರ್ಚನೆ ಸಹಿತ ಷೋಡಶೋಷಚಾರ ಆರಾಧನೆ, ಪೂಜೆ ಜರುಗಿತು.
ಮಧ್ಯಾಹ್ನದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಹೊಂಬುಜ ಸ್ವಾಮೀಜಿ ಮಾತನಾಡಿ, `ಜೀವನದಲ್ಲಿ ಗುರಿ ಸಾಧನೆಗೆ, ಸರ್ವಾಂಗೀಣ ಪ್ರಗತಿಗೆ ಜೈನ ಧರ್ಮ ಆಚರಣೆ ಪೂರಕ. ಜೈನ ಧರ್ಮವು ಸಮಾಜದಲ್ಲಿ ಹಿಂಸಾತ್ಮಕ ಮನೋಭಾವ ತಡೆಗಟ್ಟಿ ಸುಖ ಸಂತೋಷ ನೀಡುತ್ತದೆ~ ಎಂದರು.