ಚಿತ್ರದುರ್ಗ: ’ಟಿಪ್ಪು ಕೂಡ ಒಬ್ಬ ಉತ್ತಮ ನಾಯಕ. ಆತನ ಜಯಂತಿ ಆಚರಿಸುವುದರಲ್ಲಿ ಯಾವುದೇ ತಪ್ಪು ಇಲ್ಲ’ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದರು.
‘ಟಿಪ್ಪು ಜಯಂತಿ ವಿರೋಧಿಸುವವರು ತೆರೆದ ಹೃದಯ, ನಿರ್ವಂಚನೆ ಮನಸ್ಸಿನಿಂದ ಆತನ ಚರಿತ್ರೆ ಓದಬೇಕು. ಆಗ ಟಿಪ್ಪು ಏನೆಂಬುದು ಅರ್ಥವಾಗುತ್ತದೆ. ಆತನ ಜಯಂತಿಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ 1 ಕೋಟಿ ಮಂದಿ ರೇಷ್ಮೆ ವ್ಯವಸಾಯ ಅವಲಂಬಿಸಿದ್ದಾರೆ. ಈ ಕ್ಷೇತ್ರವನ್ನು ಅಂದಿನ ಕಾಲದಲ್ಲಿ ಅಭಿವೃದ್ಧಿ ಪಡಿಸಿದವರಲ್ಲಿ ಟಿಪ್ಪು ಮುಖ್ಯನಾದವನು’ ಎಂದರು.
‘ಶೃಂಗೇರಿಯ ಶಾರದಾಂಬೆ ದೇವಿಗೆ ಟಿಪ್ಪು ನೀಡಿದ ಆಭರಣಗಳನ್ನು ಹಾಕುತ್ತೇವೆ ಎಂಬುದಾಗಿ ಅಲ್ಲಿನ ಗುರುಗಳೇ ಹೇಳಿದ್ದಾರೆ. ಅದೇ ರೀತಿ ನಂಜನಗೂಡಿನ ನಂಜುಂಡೇಶ್ವರ ಸ್ವಾಮಿ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಗೆ ಕೂಡ ಟಿಪ್ಪು ಕಾಣಿಕೆ ನೀಡಿದ್ದಾನೆ. ಟಿಪ್ಪುವನ್ನು ವಿಕೃತ ಮನಸ್ಸಿನಿಂದ ನೋಡುವುದು ಸರಿಯಲ್ಲ’ ಎಂದರು.
‘ನಾನು ಜೆಡಿಎಸ್ನಿಂದ ಹೊರಬಂದಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯ ಸ್ಥಿತಿ ಮೊದಲಿನಂತಿಲ್ಲ. ಅದಕ್ಕಾಗಿ ಅವರ ಕೈ ಬಲಪಡಿಸಲು ಮುಂದಾಗುವೆ. ಒಂದು ವಾರದೊಳಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರನ್ನು ಭೇಟಿ ಮಾಡಿ, ಯಾವಾಗಿನಿಂದ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯನಾಗುತ್ತೇನೆ ಎಂಬ ನಿರ್ಧಾರ ತಿಳಿಸಲಿದ್ದೇನೆ’ ಎಂದು ಸ್ಪಷ್ಟಪಡಿಸಿದರು.