ತುಮಕೂರು: ಕ್ಯಾತ್ಸಂದ್ರ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಸ್ ಟೋಲ್ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಅವರ ಮೇಲೆ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶಗೌಡ ಕಳೆದ ಶುಕ್ರವಾರ ಹಲ್ಲೆ ಮಾಡಿದ್ದಾರೆ.
‘ಏಕಾಏಕಿ ತಮ್ಮ ಕಚೇರಿಗೆ ನುಗ್ಗಿದ ಶಾಸಕರು ಫಾಸ್ಟ್ ಟ್ರ್ಯಾಕ್ ಮಾರ್ಗದಲ್ಲಿ ಹೋಗಲು ಸಿಬ್ಬಂದಿ ಬಿಡಲಿಲ್ಲ ಎಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ’ ಎಂದು ಕ್ಯಾತ್ಸಂದ್ರ ಠಾಣೆಗೆ ಮಲ್ಲಿಕಾರ್ಜನ್ ಮಂಗಳವಾರ ದೂರು ನೀಡಿದ್ದಾರೆ.
ಎಸ್ಪಿ ಹೇಳಿಕೆ: ‘ಶಾಸಕ ಬಿ.ಸುರೇಶಗೌಡ ಅವರು ಹಲ್ಲೆ ನಡೆಸಿರುವ ಬಗ್ಗೆ ಅಲ್ಲಿನ ವ್ಯವಸ್ಥಾಪಕ ಮಲ್ಲಿಕಾರ್ಜುನ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾನು ಮೂರ್ನಾಲ್ಕು ದಿನಗಳ ಹಿಂದೆ ಟೋಲ್ ಕಚೇರಿಗೆ ಹೋಗಿ ಪ್ರಶ್ನೆ ಮಾಡಿದ್ದೆ. ಆದರೆ ಯಾರ ಮೇಲೂ ಹಲ್ಲೆ ಮಾಡಿಲ್ಲ. ಈಗ ನನ್ನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಗೃಹ ಸಚಿವ ರ ಆದೇಶದ ಮೇರೆಗೆ ಸಿಪಿಐ, ಪಿಎಸ್ಐ ಬೆದರಿಸಿ ದೂರು ಬರೆಸಿಕೊಂಡಿದ್ದಾರೆ’ ಎಂದು ಶಾಸಕ ಸುರೇಶ್ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.