ತುಮಕೂರು: ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆ ಹಾಗೂ ವ್ಯವಹಾರವನ್ನು ಪಾರದರ್ಶಕವಾಗಿ ನಿರ್ವಹಿಸಲು ಅನುವಾಗಿಸುವ `ಭೂಮಿ~ ಮತ್ತು `ಕಾವೇರಿ~ ತಂತ್ರಾಂಶ ಸಂಯೋಜನೆಗೆ ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಶುಕ್ರವಾರ ಇಲ್ಲಿ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಂಯೋಜನೆಯಿಂದ ಭೂ ವ್ಯವಹಾರದಲ್ಲಿ ಆಗುತ್ತಿದ್ದ ಅಕ್ರಮಗಳಿಗೆ ತಡೆ ಬೀಳಲಿದೆ. ಮಾಲೀಕತ್ವ ಒಳಗೊಂಡಂತೆ ಜಮೀನಿಗೆ ಸಂಬಂಧಿಸಿದ ಎಲ್ಲ ವಿವರಗಳು `ಭೂಮಿ~ ದತ್ತಾಂಶದಲ್ಲಿ ಲಭ್ಯವಿದ್ದರೆ ಮಾತ್ರ ನೋಂದಣಿಗೆ ಅವಕಾಶ. ಒಂದೇ ಆಸ್ತಿಯನ್ನು ಹಲವರಿಗೆ ಮಾರುವ ದಂಧೆಗೆ ಪೂರ್ಣವಿರಾಮ ಬೀಳಲಿದೆ. ಪರಿಶಿಷ್ಟರಿಗೆ ಮಂಜೂರಾಗಿ ಪರಭಾರೆಗೆ ಅವಕಾಶವಿಲ್ಲದ ಮತ್ತು ಪರಾಭಾರೆ ನಿಷಿದ್ಧ ಜಮೀನನ್ನು ಮಾರಾಟ ಮಾಡಲಾಗದು.
ಆಸ್ತಿ ಖರೀದಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಸ್ವಯಂಚಾಲಿತವಾಗಿ `ಮ್ಯುಟೇಷನ್~ ಪ್ರಕ್ರಿಯೆ ಆರಂಭವಾಗುವುದು. ಈ ಪ್ರಕ್ರಿಯೆಯ ಎಲ್ಲ ಹಂತಗಳ ಮಾಹಿತಿಯು ಎಸ್ಎಂಎಸ್ ಮೂಲಕ ಖರೀದಿದಾರರಿಗೆ ಲಭ್ಯವಾಗಲಿದೆ. ನೋಂದಣಿ ವೇಳೆ ಅಥವಾ ಮ್ಯುಟೇಷನ್ಗಾಗಿ ಅರ್ಜಿ ಸಲ್ಲಿಸುವಾಗ ಆಸಕ್ತರು ತಮ್ಮ ಮೊಬೈಲ್ ನಂಬರ್ ಒದಗಿಸಿದಲ್ಲಿ ಈ ಸೇವೆ ಲಭ್ಯ. ಇದರಿಂದಾಗಿ ಮೇಜಿನಿಂದ ಮೇಜಿಗೆ ಅಲೆಯುವ ತೊಂದರೆ ನಿವಾರಣೆಯಾಗಲಿದೆ.
ಸಾರ್ವಜನಿಕರು ಕೋರಿಕೆ ಅರ್ಜಿ ಸಲ್ಲಿಸಿದಲ್ಲಿ ಅವರ ಜಮೀನಿಗೆ ಸಂಬಂಧಿಸಿದ ಯಾವುದೇ ವಹಿವಾಟು ನಡೆದಲ್ಲಿ ಎಸ್ಎಂಎಸ್ ಮೂಲಕ ಕೂಡಲೇ ಜಾಗೃತ ಸಂದೇಶ ರವಾನೆ ಆಗಲಿದೆ. ಮಾಲೀಕರ ಗಮನಕ್ಕೆ ಬಾರದೆ ಅಕ್ರಮವಾಗಿ ಜಮೀನು ಪರಭಾರೆ ಮಾಡುವ ಪ್ರಯತ್ನಗಳಿಗೆ ಇದರಿಂದ ಕಡಿವಾಣ ಬೀಳಲಿದೆ. ಈ ಎಸ್ಎಂಎಸ್ ಸಂದೇಶ ರವಾನೆ ವ್ಯವಸ್ಥೆ ಶುಕ್ರವಾರದಿಂದಲೇ ರಾಜ್ಯದಾದ್ಯಂತ ಜಾರಿಗೆ ಬಂದಿದೆ.