ಬೆಂಗಳೂರು: ಎಲ್ಲ ಮಾದರಿ ಹಾಲಿನ ಮಾರಾಟ ದರವನ್ನು ಫೆಬ್ರುವರಿ 1ರಿಂದ ಪ್ರತಿ ಲೀಟರ್ಗೆ ರೂ 4 ಹೆಚ್ಚಿಸಲು ಅನುಮತಿ ಕೊಡುವಂತೆ ಸೋಮವಾರ ನಡೆದ ಕರ್ನಾಟಕ ಹಾಲು ಮಹಾಮಂಡಲದ (ಕೆಎಂಎಫ್) ಆಡಳಿತ ಮಂಡಳಿಯ ಸಭೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ
ಕೆಎಂಎಫ್, ಸದ್ಯ ರೂ30 ಕೋಟಿ ನಷ್ಟದಲ್ಲಿದೆ. ಹೀಗಾಗಿ ಹಾಲಿನ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅಧ್ಯಕ್ಷ ಜಿ.ಸೋಮಶೇಖರ ರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು.
ಈ ಮಧ್ಯೆ, ಹಾಲಿನ ದರ ಏರಿಕೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿಧಾನಸೌಧದಲ್ಲಿ ಹೇಳಿದರು.
ಮರುಪರೀಕ್ಷೆಗೆ ತೀರ್ಮಾನ: ಕೆಎಂಎಫ್ನಲ್ಲಿ ಖಾಲಿ ಇದ್ದ ವಿವಿಧ ದರ್ಜೆಯ 53 ಹುದ್ದೆಗಳಿಗೆ ನಡೆಸಿದ ಲಿಖಿತ ಪರೀಕ್ಷೆ, ನಿಯಮಗಳಿಗೆ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಮರು ಪರೀಕ್ಷೆ ನಡೆಸಲು ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹುದ್ದೆಗಳಿಗೆ ಸಂದರ್ಶನ ನಡೆಸಲು ಸಿದ್ಧತೆ ನಡೆದಿತ್ತು. ಆದರೆ, ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಹರ್ಷ ಗುಪ್ತ ಅವರು ಅದಕ್ಕೆ ಅವಕಾಶ ನೀಡದೆ, ನಿಯಮಗಳ ಅನುಸಾರ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು ಎಂದು ಆಗ್ರಹಪಡಿಸಿದರು. ಆಡಳಿತ ಮಂಡಳಿ ಇದಕ್ಕೆ ಒಲ್ಲದ ಮನಸ್ಸಿನಲ್ಲೇ ಒಪ್ಪಿಗೆ ಸೂಚಿಸಿತು ಎನ್ನಲಾಗಿದೆ.