ಬೆಂಗಳೂರು: ಖಾಸಗಿ ಉದ್ಯಮಗಳ ಕಾರ್ಮಿಕರ ನಿವೃತ್ತಿ ವಯಸ್ಸನ್ನು ಈ ತಿಂಗಳಿಂದಲೇ ಅನ್ವಯವಾಗುವಂತೆ 58ರಿಂದ 60ಕ್ಕೆ ಹೆಚ್ಚಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
20ಕ್ಕಿಂತ ಹೆಚ್ಚು ನೌಕರರು ಕೆಲಸ ಮಾಡುವ ಅಂಗಡಿ, ವಾಣಿಜ್ಯ ಸಂಸ್ಥೆ, ಕೈಗಾರಿಕೆ, ಉದ್ದಿಮೆ ಮತ್ತು ತಯಾರಿಕಾ ಘಟಕಗಳಲ್ಲಿ ಕೆಲಸ ನಿರ್ವಹಿಸುವವರಿಗೆ ನಿವೃತ್ತಿ ವಯೋಮಿತಿ ಏರಿಕೆ ಅನ್ವಯ ಆಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಮಂಡಿಸಿದ ಬಜೆಟ್ನಲ್ಲಿ ಈ ಕುರಿತು ಪ್ರಸ್ತಾಪಿಸಿದ್ದರು. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಶನಿವಾರವೇ (ಮಾ. 25) ರಾಜ್ಯ ಪತ್ರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ, ಮಾರ್ಚ್ನಲ್ಲಿ ನಿವೃತ್ತಿಯಾಗುವ ಕಾರ್ಮಿಕರಿಗೂ ಹೆಚ್ಚುವರಿಯಾಗಿ ಎರಡು ವರ್ಷ ಸೇವಾವಧಿ ಸಿಗುವಂತೆ ಕ್ರಮ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘1961ರ ಕರ್ನಾಟಕ ಔದ್ಯೋಗಿಕ ಉದ್ಯೋಗಗಳ(ಸ್ಥಾಯಿ ಆದೇಶ) ನಿಯ ಮಾವಳಿ’ಗಳಿಗೆ ತರಲಾದ ತಿದ್ದುಪಡಿಗಳ ಅನುಸಾರ ಈ ನಿಯಮ ಜಾರಿಗೊಳಿಸಲು ಕಾರ್ಮಿಕ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ, ‘ಸ್ಥಾಯಿ ಆದೇಶ’ದಿಂದ ವಿನಾಯಿತಿ ಪಡೆಯುತ್ತಾ ಬಂದಿರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳಿಗೆ ಈ ನಿಯಮದಿಂದ ವಿನಾಯಿತಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಸಂಸ್ಥೆಯ ನೀತಿಯ ಅನುಸಾರ ಅಥವಾ ಕಾರ್ಮಿಕ ಮತ್ತು ಮಾಲೀಕರ ಮಧ್ಯೆ ಆಗಿರುವ ಒಪ್ಪಂದದಲ್ಲಿ ನೌಕರರ ಅಥವಾ ಕಾರ್ಮಿಕರ ನಿವೃತ್ತಿ ವಯೋಮಿತಿ 58 ಎಂದು ನಿಗದಿಯಾಗಿದ್ದರೆ ಅದನ್ನು 60ಕ್ಕೆ ಏರಿಕೆ ಮಾಡುವುದು ಹೊಸ ನಿಯಮಗಳ ಪ್ರಕಾರ ಕಡ್ಡಾಯವಾಗಲಿದೆ.
ರಾಜ್ಯ ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ
ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 3ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳದ ಆದೇಶ ಅಧಿಕೃತವಾಗಿ ಹೊರಬಿದ್ದ ಬಳಿಕ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದ ಆದೇಶ ಹೊರಡಿಸಲಾಗುವುದು ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ. ಸದ್ಯ ನೌಕರರ ಮೂಲವೇತನಕ್ಕೆ ಶೇ 40.25 ರಷ್ಟು ತುಟ್ಟಿಭತ್ಯೆ ನೀಡಲಾಗುತ್ತಿದೆ. ಶೇ 3ರಷ್ಟು ಹೆಚ್ಚಿಸಿದರೆ ಶೇ 43.25ಕ್ಕೆ ಏರಿಕೆಯಾಗಲಿದೆ.