ಮೂಡುಬಿದಿರೆ: ಚಿತ್ರದುರ್ಗದ 'ಕೋತಿರಾಮ' ಖ್ಯಾತಿಯ ಜ್ಯೋತಿ ಪ್ರಕಾಶ್ ಶನಿವಾರ ಆಳ್ವಾಸ್ ನುಡಿಸಿರಿಯ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.ಯಾವುದೇ ಹಗ್ಗ, ಇನ್ನಿತರ ಸಾಮಗ್ರಿಗಳ ಸಹಾಯವಿಲ್ಲದೆ ಬರಿಗೈಯಲ್ಲಿ 8 ಅಂತಸ್ತಿನ ಕಾಲೇಜು ಕಟ್ಟಡವನ್ನು ಏರಿ ಸಾಹಸ ಮೆರೆದರು.
ಇವರು ಒಂದೊಂದೇ ಅಂತಸ್ತುಗಳನ್ನು ಏರುವಾಗಲೂ ನೆರೆದಿದ್ದ ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.ಅಂತಿಮವಾಗಿ ಅವರು ಕಟ್ಟಡದ ಮೇಲ್ತುದಿಯನ್ನು ಏರಿದ್ದನ್ನು ಕಂಡು ಜನ ಬೆರಗುಪಟ್ಟರು.
ಇದಕ್ಕೂ ಮುಂಚೆ ಸುದ್ದಿಗಾರರ ಜತೆ ಮಾತನಾಡಿದ ಅವರು 'ಕಾರ್ಯಕ್ರಮ ಸಂಘಟಕರ ಆಹ್ವಾನದ ಮೇರೆಗೆ ಬಂದಿದ್ದು, ಯಾವುದೇ ಹಣಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ಈ ಸಾಹಸ ಮಾಡುತ್ತಿರುವೆ' ಎಂದು ತಿಳಿಸಿದರು. ಯಾವುದೇ ಶಾಲಾ ಕಾಲೇಜಿನವರು ಬಯಸಿದ್ದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರಕ್ಷಣಾ ಮುನ್ನೆಚ್ಚರಿಕೆ ತೆಗೆದುಕೊಂಡು ತರಬೇತಿ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.