ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಲಾಡ್ಗೆ ಪಾಸ್ಪೋರ್ಟ್ ನೀಡುವಂತೆ ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತಂತೆ ಅನಿಲ್ ಲಾಡ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ಅವರಿದ್ದ ಏಕಸದಸ್ಯ ಪೀಠವು ಸೋಮವಾರ ವಿಲೇವಾರಿ ಮಾಡಿತು.ಅರ್ಜಿದಾರರ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ‘ಲಾಡ್ ಅವರು ಯಾವ ಕಾರಣಕ್ಕಾಗಿ ಮತ್ತು ಎಲ್ಲಿಗೆ ಎಷ್ಟು ದಿನ ತೆರಳಲಿದ್ದಾರೆ ಎಂಬ ವಿವರಗಳನ್ನು ನೀಡಿಲ್ಲ. ಹೀಗಾಗಿ ಪಾಸ್ಪೋರ್ಟ್ ನೀಡಬೇಕೆಂದು ನಿರ್ದೇಶನ ನೀಡುವುದು ಸರಿಯಲ್ಲ’ ಎಂದು ಹೇಳಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠವು, ‘ಅರ್ಜಿದಾರರ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ತಮ್ಮ ಪ್ರವಾಸದ ಕಾರಣ ಮತ್ತು ಇತರೆ ವಿವರಗಳನ್ನು ಸಲ್ಲಿಸಿ ಪಾಸ್ಪೋರ್ಟ್ ಪಡೆಯಲು ಮನವಿ ಮಾಡಬಹುದು’ ಎಂದು ಸೂಚಿಸಿದರು.