ಬೆಂಗಳೂರು: ‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ವಿಧಾನಸಭೆಯಲ್ಲಿ ತಿಳಿಸಿದರು.
ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆಗೆ ಉತ್ತರಿಸಿದ ಅವರು, ‘ಹೊರಗುತ್ತಿಗೆ ಆಧಾರದಲ್ಲಿ ಒಟ್ಟು 15,454 ಪೌರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು ಅವರಿಗೆ ಕನಿಷ್ಠ ವೇತನ ₹ 14,040 (ಮಹಾ ನಗರಪಾಲಿಕೆಗಳು), ₹ 13,650 (ನಗರಸಭೆಗಳು ಗ್ರೇಡ್1) , ₹ 13,260 (ನಗರಸಭೆಗಳು ಗ್ರೇಡ್ 2 ಮತ್ತು ಪುರಸಭೆಗಳು). ₹ 12,870 (ಪಟ್ಟಣ ಪಂಚಾಯಿತಿಗಳು) ನಿಗದಿ ಮಾಡಲಾಗಿದೆ’ ಎಂದರು,
‘ಪೌರ ಕಾರ್ಮಿಕರ ಸೇವೆಯನ್ನು ಹಂತ ಹಂತವಾಗಿ ಕಾಯಂಗೊಳಿಸಲು ಈಗಾಗಲೇ ತೀರ್ಮಾನಿಸಲಾಗಿದೆ. ಹರಿಯಾಣ ರಾಜ್ಯದಲ್ಲಿ ಪೌರ ಕಾರ್ಮಿಕರಿಗೆ ನೀಡುತ್ತಿರುವ ವೇತನ ಮತ್ತು ಇತರ ಸೌಲಭ್ಯಗಳ ಕುರಿತು ಅಧ್ಯಯನ ಮಾಡಿ ವರದಿ ನೀಡುವಂತೆ ಸಫಾಯಿ ಕರ್ಮಚಾರಿ ಆಯೋಗಕ್ಕೆ ಕೇಳಲಾಗಿತ್ತು. ಆಯೋಗ ವರದಿ ಸಲ್ಲಿಸಿದೆ. ಅದರ ಆಧಾರದಲ್ಲಿ ವೃಂದ ಮತ್ತು ನೇಮಕಾತಿ ನಿಯಮ ರಚಿಸಲಾಗುತ್ತಿದೆ’ ಎಂದರು.